ADVERTISEMENT

ಶಾಬಂದ್ರಿ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 11:12 IST
Last Updated 17 ಏಪ್ರಿಲ್ 2013, 11:12 IST

ಭಟ್ಕಳ: ಭಟ್ಕಳ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಇನಾಯತ್ ಉಲ್ಲಾ ಶಾಬಂದ್ರಿ ಮಂಗಳವಾರ ಚುನಾವಣಾಧಿಕಾರಿ ಡಾ.ವಿಆರ್‌ಪಿ ಮನೋಹರ್ ಅವರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಪಟ್ಟಣದ ಸುಲ್ತಾನ್‌ಪಳ್ಳಿಯಿಂದ ಶಂಸುದ್ದೀನ್ ವೃತ್ತದವರೆಗೆ ಸಾವಿರಾರು ಕಾರ್ಯಕರ್ತ ಬೆಂಬಲಿಗರೊಂದಿಗೆ ಅವರು ಮೆರವಣಿಗೆ ನಡೆಸಿದರು. ತಂಜೀಮ್ ಸಂಸ್ಥೆಯ ಪ್ರಮುಖರು ಸಹ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ತಂಜೀಮ್‌ನ ಸೈಯದ್ ಮೊಯಿದ್ದೀನ್ ಬರ್ಮಾವರ್, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಗಣಪಯ್ಯ ಗೌಡ, ಪಾಂಡುರಂಗ ನಾಯ್ಕ, ವಕೀಲ ಸಂತೋಷ ನಾಯ್ಕ ಉಪಸ್ಥಿತರಿದ್ದರು.

ಪಕ್ಷೇತರ ಅಭ್ಯರ್ಥಿಯಿಂದ ನಾಮಪತ್ರ:
ಭಟ್ಕಳ ವಿಧಾನಸಭಾ ಕ್ಷೇತ್ರದಿಂದ  ಪಕ್ಷೇತರ ಅಭ್ಯರ್ಥಿಯಾಗಿ ಭಟ್ಕಳದ ಮದೀನಾ ಕಾಲೊನಿಯ ನಜೀಮ್ ಮುಲ್ಲಾ ಮಂಗಳವಾರ ಚುನಾವಣಾಧಿ ಕಾರಿ ಡಾ.ವಿಆರ್‌ಪಿ ಮನೋಹರ್‌ಗೆ ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೇಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಈವರೆಗೆ ಭಟ್ಕಳ ಕ್ಷೇತ್ರದಲ್ಲಿ ಒಟ್ಟು 7 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.