ಶಿರಸಿ: ಆರ್ಯ ಈಡಿಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಣೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಮುಖರನ್ನು ಸನ್ಮಾನಿಸುವ ಮೂಲಕ ಉತ್ತರ ಕನ್ನಡ ಜಿಲ್ಲಾ ಆರ್ಯ ಈಡಿಗ, ನಾಮಧಾರಿ, ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ ಜರುಗಿತು.
ಭಾನುವಾರ ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ 25 ಪ್ರತಿಭೆಗಳಿಗೆ ಪುರಸ್ಕಾರ ನೀಡಲಾಯಿತು. ಭಾರತ ಸೇವಾದಳದ ರಾಜ್ಯ ದಳಪತಿಯಾಗಿ ಆಯ್ಕೆಯಾಗಿರುವ ಜೆ.ಎಸ್.ನಾಯ್ಕ ಹಾಗೂ ರಾಣೆಬೆನ್ನೂರು ತಹಶೀಲ್ದಾರ್ ಶಿವಕುಮಾರ ಎಚ್. ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡದ ಅಪರ-ಆಯುಕ್ತರ ಕಾರ್ಯಾಲಯದ ನಿರ್ದೇಶಕ ಜಿ.ಎಸ್. ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹ್ವತ್ವದ್ದಾಗಿದೆ. ಪ್ರತಿ ಮಗು ಶಿಕ್ಷಣ ಪಡೆಯುವಲ್ಲಿ ಸಮಾಜವೂ ಮುತುವರ್ಜಿ ವಹಿಸಬೇಕು. ಆರ್ಯ ಈಡಿಗ ಸಮುದಾಯದ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಪ್ರತಿ ವ್ಯಕ್ತಿ ನೆರವಾಗಬೇಕು ಎಂದರು.
ಸನ್ಮಾನ ಸ್ವೀಕರಿಸಿದ ಶಿವಕುಮಾರ ಎಚ್. ಮಾತನಾಡಿ, `ಆರ್ಯ ಈಡಿಗ ಸಮುದಾಯದಲ್ಲಿ ಸಂಘಟನೆ ಕೊರತೆ ಇದ್ದು, ಎಲ್ಲರೂ ಸಂಘಟಿತರಾಗುವ ಅಗತ್ಯವಿದೆ. ಸಮುದಾಯದ ಬಗ್ಗೆ ಗೌರವ, ಕಳಕಳಿ ಇದ್ದಾಗ ಆಂತರಿಕ ಅಭಿವೃದ್ಧಿ ಸಾಧ್ಯ' ಎಂದರು.
ಸಂಘಟನೆ ಅಧ್ಯಕ್ಷ ಆರ್.ಜಿ.ನಾಯ್ಕ, ಬರಹಗಾರ ಅರವಿಂದ ಕರ್ಕಿಕೋಡಿ, ನಿವೃತ್ತ ಅಧಿಕಾರಿ ವಿ.ಜಿ.ನಾಯ್ಕ ಉಪಸ್ಥಿತರಿದ್ದರು. ಎಸ್.ಬಿ.ನಾಯ್ಕ ಸ್ವಾಗತಿಸಿದರು. ಎಂ.ಎಚ್. ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.