ADVERTISEMENT

ಸಂಘಟನೆಗೆ ಸಕ್ರಿಯರಾಗಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 7:15 IST
Last Updated 8 ಅಕ್ಟೋಬರ್ 2012, 7:15 IST

ಸಿದ್ದಾಪುರ: `ತಮ್ಮಳಗಿನ ಭಿನ್ನಾಭಿಪ್ರಾಯ ಮತ್ತು ಗುಂಪುಗಾರಿಕೆಯನ್ನು ಬದಿಗೊತ್ತಿ ಸಮಾಜದ ಸಂಘಟನೆಯಲ್ಲಿ ಎಲ್ಲರೂ ಸಕ್ರಿಯರಾಗಬೇಕು~ ಎಂದು ಒಕ್ಕಲಿಗ ಸಮಾಜದ ಮುಖಂಡರೂ ಆದ  ಹುತ್ಗಾರ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಈಶ್ವರ ರಾಮಾ ಗೌಡ ಸಲಹೆ ನೀಡಿದರು.

ಸಿದ್ದಾಪುರ ತಾಲ್ಲೂಕಿನ ಗೋಳಿಮಕ್ಕಿಯಲ್ಲಿ ಭಾನುವಾರ ನಡೆದ ತಾಲ್ಲೂಕಿನ ನಿಲ್ಕುಂದ, ಹೆಗ್ಗರಣಿ ಮತ್ತು ಅಣಲೇಬೈಲ್ ವ್ಯಾಪ್ತಿಯ ಒಕ್ಕಲಿಗರ  ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
`ನಮಗೆ ಸಂಘಟನೆ ಬೇಕು ಎಂಬುದು ಇಲ್ಲಿನ ಎಲ್ಲ ಒಕ್ಕಲಿಗರ ಅಭಿಪ್ರಾಯ.

ಆದರೆ ಈವರೆಗೆ ಅಂಥ  ಸಂಘಟನೆ ನಮಗೆ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ  ನಾಯಕತ್ವದ ಕೊರತೆ. ನಮ್ಮ ಸಮಾಜ ಹೆಚ್ಚಿನ ಅಭಿವೃದ್ಧಿ ಸಾಧಿಸಲು ಸಂಘಟನೆ ಬೇಕು ಮತ್ತು ನಮ್ಮ ಸಂಘಟನೆ ಪಕ್ಷಾತೀತವಾಗಿ ಇರಬೇಕು~ ಎಂದರು.

`ನಾವು ಅಭಿವೃದ್ಧಿ ಹೊಂದಲು ಶಿಕ್ಷಣವೂ ಮುಖ್ಯ. ನಾವು ಕೇವಲ ಕೃಷಿ ಕೆಲಸಕ್ಕೆ ಸೀಮಿತವಾಗದೇ, ಶಿಕ್ಷಣ ಪಡೆಯುವುದಕ್ಕೆ ಆದ್ಯತೆ ನೀಡಬೇಕು. ಪ್ರತಿಯೊಂದು ಮನೆಯಲ್ಲಿಯೂ ಒಬ್ಬರಾದರೂ ಶಿಕ್ಷಣ ಪಡೆಯಲೇಬೇಕು~ ಎಂದರು.

ನಿವೃತ್ತ ಅಂಚೆ ಅಧಿಕಾರಿ ಅಣ್ಣು ಕಟ್ಯಾ ಗೌಡ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ವಕೀಲ ಆನಂದ ಗೌಡ, ಲಕ್ಷ್ಮಣ ಗೌಡ, ಜಿ.ಎನ್. ಗೌಡ ಕೊಡಾಣಿ, ಸೋಮೇಶ್ವರ ಗೌಡ ಕಬ್ಬೆ, ಶ್ರೀಧರ ಪಟಗಾರ ಕುಮಟಾ, ಎನ್.ಎಲ್. ಗೌಡ ಕಿಲವಳ್ಳಿ, ಬೀರಾ ದ್ಯಾವಾ ಗೌಡ ಉಡಳ್ಳಿ, ಮಂಜುಳಾ ನಾರಾಯಣ ಗೌಡ ಗೋಳಿಮಕ್ಕಿ, ಜಿ.ಪಂ. ಮಾಜಿ ಸದಸ್ಯೆ ನೇತ್ರಾವತಿ ನರಸಿಂಹ ಗೌಡ ಗೋಳಿಮಕ್ಕಿ, ತಾಲ್ಲೂಕು
ಪಂಚಾಯಿತಿ ಸದಸ್ಯೆ ಮಾದೇವಿ ರಾಮಾ ಗೌಡ ಹಾಗೂ ಗೌರಿ ಅಣ್ಣಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಚೈತ್ರಾ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ನಾಗಪತಿ ಗೌಡ ಸ್ವಾಗತಿಸಿದರು. ಶಿವರಾಮ ಗೌಡ ಹೆಗ್ಗರಣಿ ಪ್ರಾಸ್ತಾವಿಕ ಮಾತನಾಡಿದರು.  ಬಿಳಿಯಾ ರಾಮ ಗೌಡ ಸಂಗಡಿಗರು ಬಿಂಗಿ ಪದ ಹಾಡಿದರು.  ಲೋಕೇಶ ಗೌಡ ಮತ್ತು ಎಂ.ಎಚ್.ಗೌಡ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.