ADVERTISEMENT

ಸದಾಶಿವ ಆಯೋಗ ವರದಿ ಜಾರಿಯಾಗಲಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 6:58 IST
Last Updated 26 ಮಾರ್ಚ್ 2018, 6:58 IST

ಶಿರಾ: ‘ಆದಿ ಜಾಂಬವ ಜನಾಂಗವು ದೇಶದ ಮೂಲ ನಿವಾಸಿಗಳಾಗಿದ್ದು, ಜನಾಂಗದ ಇತಿಹಾಸವನ್ನು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಿದಾಗ ಮಾತ್ರ ಜನಾಂಗದ ಬಗ್ಗೆ ತಿಳಿವಳಿಕೆ ಮೂಡಿಸಲು ಸಾಧ್ಯ’ ಎಂದು ಸಾಹಿತಿ ಡಾ.ಓ. ನಾಗರಾಜು ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಕರ್ನಾಟಕ ಆದಿಜಾಂಬವ ಯುವ ಸೇನಾ ಸಮಿತಿ ಹಮ್ಮಿಕೊಂಡಿದ್ದ 3ನೇ ವರ್ಷದ ವಾರ್ಷಿಕೋತ್ಸವ ಹಾಗೂ ಆದಿಜಾಂಬವ ಜಂಬು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

’ಭಾರತೀಯ ಸಂಸ್ಕೃತಿಗೆ ಸಪ್ತಸ್ವರಗಳನ್ನು ಹಾಗೂ ಶಾಸ್ತ್ರೀಯ ಸಂಗೀತವನ್ನು ಪರಿಚಯಿಸಿದವರು ಮಾತಂಗ ಮುನಿಗಳು. ಆದರೆ ತಳ ಸಮುಯದಾಯದವರು ಪರಿಚಯಿಸಿದ ಕೊಡುಗೆಗಳು ಇಂದು ಬೇರೆಯವರ ಸ್ವತ್ತಾಗುತ್ತಿವೆ’ ಎಂದರು.

ADVERTISEMENT

’ಸರ್ಕಾರ ಲಿಂಗಾಯತ –ವೀರಶೈವ ಧರ್ಮ ಸ್ಥಾಪನೆ ಮುಂದಾಗಿರುವುದು ಸ್ವಾಗತಾರ್ಹವಾದುದು. ಅದೇ ರೀತಿ ನಮ್ಮ ಜನಾಂಗದ ಬೇಡಿಕೆಯಾದ ಸದಾಶಿವ ಆಯೋಗದ ವರದಿಯನ್ನು ಮೂಲೆಗುಂಪು ಮಾಡದೆ ಜಾರಿಗೆ ತರಬೇಕು’ ಎಂದರು.

ಸಂಶೋಧಕ ಡಾ.ಲಿಂಗಣ್ಣ ಜಂಗಮರಹಳ್ಳಿ ಮಾತನಾಡಿ, ‘ಆದಿಜಾಂಬವ ಜನಾಂಗವು ರಾಜಕೀಯವಾಗಿ ಪ್ರಬಲವಾಗಲು ಸಾಧ್ಯವಾಗಿಲ್ಲ. ನಾವು ಅಭಿವೃದ್ಧಿ ಸಾಧಿಸಬೇಕಾದರೆ ನಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುವುದರ ಜೊತೆಗೆ ವೈಚಾರಿಕ ಶಿಕ್ಷಣ ನೀಡಬೇಕು’ ಎಂದರು.

ಕೋಡಿಹಳ್ಳಿ ಆದಿಜಾಂಬವ ಮಠದ ಪೀಠಾಧ್ಯಕ್ಷ ಮಾರ್ಕಾಂಡೇಯ ಮುನಿಸ್ವಾಮಿ ಮಾತನಾಡಿ, ‘ಆದಿಜಾಂಬವ ಜಂಬು ಜಯಂತಿ ಕೇವಲ ಒಂದು ದಿನ ಆಚರಣೆಯಾಗಬಾರದು ವರ್ಷವಿಡೀ ಆಚರಿಸುವಂತಾಗಬೇಕು. ಜನಾಂಗದ ಮುಖಂಡರು, ವಿಚಾರವಂತರು, ವಿದ್ಯಾವಂತರೂ ಪ್ರತಿ ಗ್ರಾಮಗಳಲ್ಲಿ ಜನಾಂಗದ ಜನತೆಯನ್ನು ಒಂದೆಡೆ ಸೇರಿಸಿ ನಮ್ಮ ಜನಾಂಗದ ಸಾಂಸ್ಕೃತಿಕ ವೈಭವದ ಬಗ್ಗೆ ಅರಿವು ಮೂಡಿಸಬೇಕು’ ಎಂದು ಅವರು ಮಾತನಾಡಿದರು.

ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಕೊಟ್ಟಶಂಕರ್, ಬಿಎಸ್‌ಪಿ ಮುಖಂಡ ಜೆ.ಎನ್.ರಾಜಸಿಂಹ, ನಿವೃತ್ತ ಪ್ರಾಂಶುಪಾಲ ಕೃಷ್ಣಮೂರ್ತಿ, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಟೈರ್‌ರಂಗನಾಥ್, ಮಾದಿಗ ದಂಡೋರ ರಾಜ್ಯ ಕಾರ್ಯಧ್ಯಕ್ಷ ಮಾಗೋಡು ಯೋಗಾನಂದ್ ಮಾತನಾಡಿದರು.

ಸಮಾಜ ಸೇವಕ ನರಸಿಂಹಮೂರ್ತಿ, ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಸತೀಶ್, ಶಿಕ್ಷಕ ದ್ವಾರನಕುಂಟೆ ಲಕ್ಷ್ಮಣ್, ಮನು ಸಿದ್ದಾರ್ಥ, ಉಪನ್ಯಾಸಕ ಶಾಂತಕುಮಾರ್, ಕರ್ನಾಟಕ ಆದಿಜಾಂಬ ಯುವಸೇನಾ ಸಮಿತಿ ಅಧ್ಯಕ್ಷ ಗುರುಲಿಂಗಪ್ಪ, ಉಪಾಧ್ಯಕ್ಷ ಕೆಂಚರಾಯಪ್ಪ, ಕಾರ್ಯಧ್ಯಕ್ಷ ಲಕ್ಷ್ಮಣ, ಶಿವಣ್ಣ, ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.