ಕಾರವಾರ (ಉತ್ತರ ಕನ್ನಡ): ಇಲ್ಲಿನ ಸೀಬರ್ಡ್ ನೌಕಾನೆಲೆ ವ್ಯಾಪ್ತಿಯ ಕಾಮತ್ ಬೀಚ್ ಸಮೀಪದ ಕಾಂಪೌಂಡ್ ಬಳಿ ಸೋಮವಾರ ಬೆಳಿಗ್ಗೆ 4 ವರ್ಷ ಪ್ರಾಯದ 8.50 ಅಡಿ ಉದ್ದದ ಮೊಸಳೆಯೊಂದು ಕಾಣಿಸಿಕೊಂಡು ಕೆಲ ಕಾಲ ಆತಂಕ ಮೂಡಿಸಿತು.
ತಂತಿ ಬೇಲಿಗೆ ಕಾಲು ಸಿಲುಕಿಕೊಂಡಿದ್ದರಿಂದ ಅದು ಮುಂದೆ ಸಾಗದೆ ಅಲ್ಲಿಯೆ ಮಲಗಿತ್ತು. ಇದನ್ನು ಕಂಡ ನೌಕಾನೆಲೆ ಅಧಿಕಾರಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ವನ್ಯಜೀವಿ ರಕ್ಷಕರಾದ ಅಶೋಕ ನಾಯ್ಕ, ಮಹೇಶ್ ನಾಯ್ಕ ಹಾಗೂ ಪವನ್ ಅರಣ್ಯ ಸಿಬ್ಬಂದಿ ಜತೆಗೂಡಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅದರ ಕಣ್ಣಿಗೆ ಬಟ್ಟೆ ಕಟ್ಟಿ ಆನಂತರ ಅದನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಿದರು.
‘ಹಳ್ಳದಲ್ಲಿ ಹರಿಯುವ ನೀರಿನ ಮೂಲಕ ಮೊಸಳೆಯು ನೌಕಾನೆಲೆಯೊಳಗೆ ಪ್ರವೇಶಿಸಿರುವ ಸಾಧ್ಯತೆ ಇದೆ. ಇದನ್ನು ಗಂಗಾವಳಿ ನದಿಯಲ್ಲಿ ಬಿಡಲಾಗುವುದು’ ಎಂದು ಆರ್ಎಫ್ಒ ರಾಘವೇಂದ್ರ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.