ಅಂಕೋಲಾ: `ಸಮೀಪದ ಹಟ್ಟಿಕೇರಿ ಗ್ರಾಮದಲ್ಲಿ ಸಾಮಾಜಿಕ ನ್ಯಾಯಕ್ಕೆ ಮತ್ತು ಭದ್ರತೆಗೆ ಅಪಾಯವುಂಟಾಗಿದೆ. ಇಂತಹ ಪಟ್ಟ ಭದ್ರರನ್ನು ನಿಯಂತ್ರಿಸಿ ಶ್ರಮಜೀವಿಗಳ ಹಕ್ಕುಗಳನ್ನು ರಕ್ಷಿಸಬೇಕು~ ಎಂದು ಆಗ್ರಹಿಸಿ ಹಟ್ಟಿಕೇರಿಯ ಶ್ರೀ ಹಟ್ಟಿಕೇಶ್ವರ ಅಸಂಘಟಿತ ವಲಯದ ಕೂಲಿಕಾರ್ಮಿಕರ ಸಂಘಟನೆಯ ಪದಾಧಿಕಾರಿಗಳು ಮತ್ತು ನೂರಾರು ಕಾರ್ಮಿಕರು ಬುಧವಾರ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
`ನೌಕಾನೆಲೆಗಾಗಿ ತಮ್ಮ ವಸತಿ, ಜಮೀನು ಒಳಗೊಂಡಂತೆ ಅಸ್ತಿತ್ವವನ್ನೇ ತ್ಯಾಗ ಮಾಡಿರುವ ಇಲ್ಲಿನ ಜನರಿಗೆ ಹೊರರಾಜ್ಯದ ಕಂಪೆನಿಗಳು ಸೀಬರ್ಡ್ ಪ್ರದೇಶದಲ್ಲಿ ಕೆಲಸ ಮಾಡಲು ಸ್ಥಳೀಯ ಕಾರ್ಮಿಕರನ್ನು ನೇಮಿಸಿಕೊಂಡು ದುಡಿಸಿಕೊಳ್ಳುತ್ತಿದ್ದರು. ಆದರೆ ಸ್ಥಳೀಯ ಗುತ್ತಿಗೆದಾರರು ಕಾರ್ಮಿಕರಿಗೆ ಕಡಿಮೆ ವೇತನ ನೀಡಿ ಅವರ ವೇತನದಲ್ಲಿ ಸಿಂಹಪಾಲನ್ನು ಪಡೆದುಕೊಳ್ಳುತ್ತಿದ್ದರು.
ಇದನ್ನು ವಿರೋಧಿಸಿ ಸ್ಥಳೀಯ ಅಸಂಘಟಿತ ಕಾರ್ಮಿಕರನ್ನು ಒಗ್ಗೂಡಿಸಿ ಸಂಘಟನೆ ಮಾಡಿಕೊಂಡು ಹೆಚ್ಚಿನ ಕೂಲಿಗಾಗಿ ಹೋರಾಟ ನಡೆಸಿದ್ದರ ಪರಿಣಾಮವಾಗಿ ಕಾರ್ಮಿಕರ ದಿನಗೂಲಿಯು 100 ರಿಂದ 180 ರೂಪಾಯಿಗೆ ಹೆಚ್ಚಳವಾಗಲು ಮತ್ತು ಮಾಸಿಕ ವೇತನ 2500 ದಿಂದ 6000 ರೂಪಾಯಿಗೆ ಏರಿಕೆಯಾಗಲು ಇಂತಹ ಹೋರಾಟ ಕಾರಣವಾಯಿತು. ಇದೀಗ ಕಾರ್ಮಿಕರ ಗುತ್ತಿಗೆದಾರರೆಂದು ಹೇಳಿಕೊಳ್ಳುವ ಕೆಲವರು ಶ್ರಮಜೀವಿಗಳ ಸಂಘಟನೆಯನ್ನು, ನಾಯಕತ್ವವನ್ನು ನಾಶಪಡಿಸಲು ಸಂಚು ನಡೆಸುತ್ತಿದ್ದಾರೆ~ ಎಂದು ತಹಶೀಲ್ದಾರರಿಗೆ ಸಲ್ಲಿಸಲಾದ ಮನವಿಯಲ್ಲಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ತಹಶೀಲ್ದಾರ ಜಿ.ಎನ್. ನಾಯ್ಕ ಮನವಿ ಸ್ವೀಕರಿಸಿದರು. ನಿರಾಶ್ರಿತ ಕೂಲಿಕಾರರ ಸಂಘದ ಪ್ರಮುಖರಾದ ಪ್ರಶಾಂತ ವಿ. ನಾಯ್ಕ, ಸಂತೋಷ ಎನ್. ನಾಯ್ಕ, ಸವಿತಾ ಜಿ. ನಾಯ್ಕ, ಲಕ್ಷ್ಮಿ ಬಿ. ನಾಯ್ಕ, ಮಂಗಲಾ ರಮೇಶ ಗೌಡ, ಪ್ರದೀಪ ಎಸ್. ಗೌಡ, ಗುರು ಎಸ್. ಗೌಡ, ರೂಪೇಶ ಎಸ್. ನಾಯ್ಕ, ಮಂಜುನಾಥ ನಾಯ್ಕ, ಸತೀಶ ನಾಯ್ಕ, ನಿತೀನ ನಾಯ್ಕ, ಪಾಂಡುರಂಗ ನಾಯ್ಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.