ADVERTISEMENT

‘ಧರ್ಮನಿಷ್ಠೆ ಹೆಚ್ಚಳಕ್ಕೆ ಭಗವದ್ಗೀತೆ ಕಾರಣ’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 6:30 IST
Last Updated 11 ಡಿಸೆಂಬರ್ 2013, 6:30 IST

ಸಿದ್ದಾಪುರ: ‘ಪ್ರತಿಯೊಬ್ಬರಿಗೂ ಅವರ ಧರ್ಮದಲ್ಲಿ ನಿಷ್ಠೆ ಹೆಚ್ಚಾಗಲು ಭಗವದ್ಗೀತೆ ಕಾರಣವಾಗುತ್ತದೆ. ಅದರೊಂದಿಗೆ ಇಡೀ ರಾಷ್ಟ್ರವೇ ಒಂದು ಎಂಬ ಭಾವನೆ ಮೂಡಿಸುವಲ್ಲಿಯೂ ಅದು ಸಹಕಾರಿಯಾಗುತ್ತದೆ’ ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಪಟ್ಟಣದ ಎಂಜಿಸಿ ಪದವಿ ಪೂರ್ವ ಕಾಲೇಜು ಮತ್ತು ಎಂಜಿಸಿ ಕಲಾ, ವಾಣಿಜ್ಯ ಹಾಗೂ ಜಿಎಚ್‌ಡಿ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ನಡೆದ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ‘ಭಗವದ್ಗೀತೆ ಮೂಲ ಸಂಸ್ಕೃತದಲ್ಲಿದೆ. ಸಂಸ್ಕೃತ ಸಮೃದ್ಧ ಸಾಹಿತ್ಯವಾಗಿದೆ. ಆಳವಾದ ಅನುಭವದ ನೆಲೆಯಲ್ಲಿ ಹಾಗೂ ದೀರ್ಘ ತಪಸ್ಸಿನ ಹಿನ್ನೆಲೆಯಲ್ಲಿ ಸಂಸ್ಕೃತ ಸಾಹಿತ್ಯ ರಚನೆಯಾಗಿದೆ.

ಧರ್ಮಶಾಸ್ತ್ರ ಮತ್ತು ವೇದಾಂತವನ್ನು ಒಳಗೊಂಡ ಭಗವದ್ಗೀತೆಗೆ ಪ್ರಾಯೋಗಿಕ ಹಿನ್ನೆಲೆಯೂ ಇದೆ. ಅದರ ಪ್ರಸಾರದ ಮೂಲಕ ಸಮಾಜವನ್ನು ಒಳ್ಳೆಯ ಸಂಸ್ಕೃತಿಯತ್ತ ಕೊಂಡೊಯ್ಯುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ನುಡಿದ ಶ್ರೀಗಳು, ‘ರಾಷ್ಟ್ರೀಯ ಭಾವೈಕ್ಯ ಬೆಳೆಸುವ ಹಿನ್ನೆಲೆಯಲ್ಲಿ ಭಗವದ್ಗೀತಾ ಅಭಿಯಾನ ನಡೆಸಲಾಗುತ್ತಿದೆ’ ಎಂದು ಸ್ಪಷ್ಟ ಪಡಿಸಿದರು.

ಭಗವದ್ಗೀತಾ ಅಭಿಯಾನದ ರಾಜ್ಯ ಸಮಿತಿ ಸದಸ್ಯ ವಿಜಯ ಹೆಗಡೆ ದೊಡ್ಮನೆ, ತಾಲ್ಲೂಕು ಸಮಿತಿ ಅಧ್ಯಕ್ಷ ಆರ್.ಜಿ.ಪೈ ಮಂಜೈನ್, ಸಂಚಾಲಕ ಎಂ.ಜಿ.ಭಟ್ಟ, ಶಿಕ್ಷಣ ಪ್ರಸಾರಕ ಸಮಿತಿಯ ಉಪಾಧ್ಯಕ್ಷ ಶಶಿಭೂಷಣ ಹೆಗಡೆ, ಕಾರ್ಯದರ್ಶಿ ಸಿ.ಆರ್. ಹೆಗಡೆ ಉಪಸ್ಥಿತರಿದ್ದರು.

ಎಂಜಿಸಿ ಕಲಾ,ವಾಣಿಜ್ಯ ಮತ್ತು ಜಿಎಚ್‌ಡಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಸೀತಾರಾಮ ಭಟ್ ಟಿ. ಅಧ್ಯಕ್ಷತೆ ವಹಿಸಿದ್ದರು. ಗಣೇಶ ಹಾಗೂ ಲಕ್ಷ್ಮೀಶ ವೇದಘೋಷ ಮಾಡಿದರು. ಚೈತ್ರಿಕಾ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ  ಆರ್.ವಿ.ಭಟ್ಟ ಸ್ವಾಗತಿಸಿದರು. ಉಪನ್ಯಾಸಕ ಶ್ರೀಕಾಂತ ಭಟ್ಟ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT