ADVERTISEMENT

ಸಹಕಾರ ಸಂಸ್ಥೆಗಳು ಅಭಿವೃದ್ಧಿಗೆ ಪ್ರಯತ್ನಿಸಲಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 6:40 IST
Last Updated 2 ಜನವರಿ 2018, 6:40 IST

ಹಳಿಯಾಳ: ಸಹಕಾರ ಸಂಸ್ಥೆಗಳು ಸಂಸ್ಥೆಯ ಲಾಭದ ಹಿತದೃಷ್ಟಿಯಿಂದ ನಡೆಯದೇ ರೈತರ, ಬಡವರ, ಗ್ರಾಮೀಣ ಜನತೆಯ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

ಸ್ಥಳೀಯ ರೈತರ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ‘ಸಹಕಾರ ಸಂಸ್ಥೆಗಳು ಸಮಯಕ್ಕೆ ಅನುಗುಣವಾಗಿ ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕವಾಗಿ ಬೆಳೆಯಬೇಕು. ಹಳಿಯಾಳದ ರೈತರ ಸೇವಾ ಸಹಕಾರಿ ಸಂಘ 1912ರಲ್ಲಿ ಸ್ಥಾಪನೆಗೊಂಡು ಈ ವರೆಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವುದು ಶ್ಲಾಘನೀಯ. ಸರ್ಕಾರ ಕೂಡ ಸಹಕಾರ ರಂಗದ ಮುಖಾಂತರ ರೈತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ರೈತರ ಪ್ರಗತಿ ಮಾಡುತ್ತಿದೆ. ಹಳಿಯಾಳ ತಾಲ್ಲೂಕಿನಲ್ಲಿ ಕಳೆದ 2 ವರ್ಷಗಳಲ್ಲಿ ₹ 116 ಕೋಟಿ ಬೆಳೆ ವಿಮೆ ಪರಿಹಾರ ಮಂಜೂರಾಗಿದ್ದು, 16300 ರೈತರಿಗೆ ಲಾಭವಾಗಿದೆ’ ಎಂದರು.

ರೈತರ ಸೇವಾ ಸಹಕಾರಿ ಸಂಘದಲ್ಲಿ ಈ ಹಿಂದೆ ಅಧ್ಯಕ್ಷರಾಗಿ, ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು. ಹಾಗೂ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಕೆ.ಕೆ.ಹಳ್ಳಿಯ ಮಠದ ಸುಬ್ರಹ್ಮಣ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ADVERTISEMENT

ವಿಧಾನಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ, ಸಂಘದ ಅಧ್ಯಕ್ಷ ಶಿವಪುತ್ರಪ್ಪ ನುಚ್ಚಂಬ್ಲಿ, ಕೆಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ. ಬಾಂದುರ್ಗಿ, ಮಾಜಿ ನಿರ್ದೇಶಕ ಎನ್.ಪಿ. ಗಾಂವಕರ, ನಿವೃತ್ತ ವ್ಯವಸ್ಥಾಪಕ ಎಸ್.ಪಿ. ಶೆಟ್ಟಿ, ಸಹಕಾರ ಉಪನಿಬಂಧಕ ಜಯಪ್ರಕಾಶ, ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ ಮಾತನಾಡಿದರು.

ಉಪಾದ್ಯಕ್ಷ ಸುಭಾಷ ಶಿಂಧೆ, ಸದಸ್ಯರಾದ ಅನಂತ ಘೋಟ್ನೇಕರ, ರೇಷ್ಮಾ ಪಾಟೀಲ, ರುಕ್ಮಾ ಭಾಗ್ವತಕರ, ಪ್ರಭಾಕರ ಗಜಾಕೋಶ, ತವನಪ್ಪ ಶಿರಗಾಪುರ, ಗುರುನಾಥ ಗೌಡ, ಆನಂದ ಕಂಚನಾಳಕರ, ಶಿವಾಜಿ ನರಸಾನಿ, ಮುಖ್ಯ ಕಾರ್ಯನಿರ್ವಾಹಕ ಬಿ.ವೈ. ಪವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.