ADVERTISEMENT

ಸಿಬಿಐ ತನಿಖೆ ಶೀಘ್ರ ಆರಂಭ: ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 9:42 IST
Last Updated 7 ಜನವರಿ 2018, 9:42 IST

ಮುರ್ಡೇಶ್ವರ (ಭಟ್ಕಳ): ‘ಮೃತ ಪರೇಶ್ ಮೇಸ್ತರ ತಂದೆ ಕಮಲಾಕರ್ ಮೇಸ್ತರ ಬೇಡಿಕೆ ಮೇರೆಗೆ ಹಾಗೂ ಪ್ರಕರಣದಲ್ಲಿ ಯಾವುದೇ ಸಂದೇಹವಿರಬಾರದು ಎಂಬ ಕಾರಣಕ್ಕಾಗಿ ಪರೇಶ್ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿದ್ದೇವೆ. ಅವರು ಬಂದು ಶೀಘ್ರವೇ ತನಿಖೆ ಪ್ರಾರಂಭಿಸಲಿದ್ದಾರೆ’ ಎಂದು ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.

ಮಾಧ್ಯಮದವರೊಂದಿಗೆ ಇಲ್ಲಿ ಶನಿವಾರ ಮಾತನಾಡಿದ ಅವರು, ‘ಅದು ಕೊಲೆಯಾಗಿದ್ದಲ್ಲಿ ಆರೋಪಿ ಯಾವುದೇ ಧರ್ಮ, ಪಂಗಡ, ಪಕ್ಷದವನಾಗಿದ್ದರೂ ಕೂಡ ಶಿಕ್ಷೆಯಾಗಬೇಕು. ಆದರೆ ಆತನ ಸಾವಿನ ಕುರಿತ ವರದಿ ಇನ್ನೂ ಬಂದಿಲ್ಲ. ಹೀಗಾಗಿ ಅದಕ್ಕೆ ಕಾರಣವೇನೆಂಬುದು ತಿಳಿದಿಲ್ಲ. ಸಿಬಿಐ ತನಿಖೆ ನಡೆಸಿದ ಬಳಿಕ ಅದರ ವರದಿಯಿಂದಾಗಿ ನಮಗೂ ಹಾಗೂ ಅವರ ಕುಟುಂಬಕ್ಕೂ ಸಮಾಧಾನ ಇರಲಿದೆ’ ಎಂದರು.

‘ಮೃತ ಪರೇಶ್ ಮೇಸ್ತ ಅವರ ಕುಟುಂಬ ಬಡತನದಲ್ಲಿದೆ ಎಂದು ಅವರ ಮನೆಯವರೆಗೆ ಹೋಗಿ ವೈಯಕ್ತಿಕವಾಗಿ ಹಣ ನೀಡಿದ್ದೆ. ಆದರೆ, ಕೆಲ ಕಿಡಿಗೇಡಿಗಳು ಅವರನ್ನು ತಪ್ಪು ಕಲ್ಪನೆಗಳನ್ನು ಮೂಡಿಸಿ, ಅದನ್ನು ವಾಪಾಸ್ಸು ಮಾಡಿಸಿದ್ದಾರೆ. ಸರ್ಕಾರದಿಂದ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಪ್ರಸ್ತಾವನೆ ಕಳುಹಿಸಿದ್ದಾರೆ. ಆದರೆ, ಅದು ಮಂಜೂರಿಯಾದರೆ ಅದನ್ನೂ ಕೂಡ ಕುಟುಂಬ ತಿರಸ್ಕರಿಸುವುದೇನೋ ಎಂಬ ಭಯ ನನಗಿದೆ’ ಎಂದು ಹೇಳಿದರು.

ADVERTISEMENT

‘ಭಟ್ಕಳದ ಮೃತ ರಾಮಚಂದ್ರ ನಾಯ್ಕ ಕುಟುಂಬಕ್ಕೆ ಸಾರ್ವಜನಿಕರ ಹಣ ಹಾಗೂ ನನ್ನ ಹಣ ಸೇರಿಸಿ ನೀಡಿದ್ದೇನೆ. ಸರ್ಕಾರದಿಂದ ₹ 2 ಲಕ್ಷವನ್ನು ಕೂಡ ಮಂಜೂರು ಮಾಡಿಸಿದೆ. ಆದರೆ ಶಾಸಕ ಮಂಕಾಳ ವೈದ್ಯ ಅದನ್ನು ನೀಡಲು ಮುಂದಾದಾಗ ಬೇಡ ಎಂದು ತಿರಸ್ಕರಿಸಿದ್ದಾರೆ. ಅವರು ಒಳ್ಳೆಯವರೇ; ಆದರೆ ಕೆಲ ರಾಜಕೀಯ ಮಾಡುವವರಿಗೆ ಆ ಕುಟುಂಬಗಳು ಬಲಿಯಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.