ADVERTISEMENT

ವಿಜ್ಞಾನ ಕೇಂದ್ರದಲ್ಲಿ ಶೂನ್ಯ ನೆರಳಿನ ದಿನ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2023, 12:26 IST
Last Updated 30 ಏಪ್ರಿಲ್ 2023, 12:26 IST
ಕಾರವಾರದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಎದುರು ಶೂನ್ಯ ನೆರಳು ಸ್ಥಿತಿಯ ವೀಕ್ಷಣೆಗೆ ಸಿದ್ಧರಾಗಿ ನಿಂತಿದ್ದ ವಿದ್ಯಾರ್ಥಿಗಳು
ಕಾರವಾರದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಎದುರು ಶೂನ್ಯ ನೆರಳು ಸ್ಥಿತಿಯ ವೀಕ್ಷಣೆಗೆ ಸಿದ್ಧರಾಗಿ ನಿಂತಿದ್ದ ವಿದ್ಯಾರ್ಥಿಗಳು   

ಕಾರವಾರ: ಇಲ್ಲಿನ ಕೋಡಿಬಾಗದಲ್ಲಿರುವ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಭಾನುವಾರ ಶೂನ್ಯ ನೆರಳಿನ ದಿನದ ಅನುಭವವನ್ನು ಹತ್ತಾರು ವಿದ್ಯಾರ್ಥಿಗಳು ಪಡೆದುಕೊಂಡರು.

ಮಧ್ಯಾಹ್ನ 12.31 ರಿಂದ 12.33ರ ಅವಧಿಯಲ್ಲಿ ಯಾವುದೇ ವಸ್ತುವಿನ ನೆರಳು ಗೋಚರಿಸದ ವಿಸ್ಮಯಕ್ಕೆ ವಿಜ್ಞಾನ ಕೇಂದ್ರದ ಸಿಬ್ಬಂದಿ, ವಿದ್ಯಾರ್ಥಿಗಳು ಸಾಕ್ಷಿಯಾದರು. ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳ 45ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಸ್ಮಯ ವೀಕ್ಷಣೆಗೆ ಬಂದಿದ್ದರು. ಶೂನ್ಯ ನೆರಳು ವೀಕ್ಷಣೆಗೆ ವಿಜ್ಞಾನ ಕೇಂದ್ರದಿಂದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕಂಬವೊಂದನ್ನು ಇಟ್ಟು ಅದರ ಮೂಲಕ ಶೂನ್ಯ ನೆರಳು ಪತ್ತೆ ಹಚ್ಚಲಾಯಿತು. ಥರ್ಮಾಕೊಲ್‍ನಲ್ಲಿ ಸಿದ್ಧಪಡಿಸಿದ್ದ ಮಾದರಿಗಳನ್ನು ಇಸಿಲಿಗೆ ಅಡ್ಡಲಾಗಿ ಹಿಡಿದು ನೆರಳು ಕಾಣದ ಸ್ಥಿತಿಯ ಅನುಭವವನ್ನು ವಿದ್ಯಾರ್ಥಿಗಳು ಪಡೆದುಕೊಂಡರು.

ADVERTISEMENT

‘ಸೂರ್ಯನು ಉತ್ತರಾಯಣದಿಂದ ದಕ್ಷಿಣಾಯನಕ್ಕೆ ಹಾಗೂ ದಕ್ಷಿಣಾಯದಿಂದ ಉತ್ತರಾಯಣಕ್ಕೆ ಹಾದು ಹೋಗುವ ವೇಳೆ ಮಾತ್ರ ಈ ಅಪರೂಪದ ವಿದ್ಯಮಾನ ನಡೆಯುತ್ತದೆ. ಸೂರ್ಯ ಭೂಮಿಯ ಶಿರೋ ಬಿಂದುವಿನ ಮೇಲೆ ಇದ್ದ ಕಾರಣ ಶೂನ್ಯ ನೆರಳು ಸೃಷ್ಟಿಯಾಗುತ್ತದೆ. ಶೂನ್ಯ ನೆರಳಿನ ಸಮಯ ಪ್ರದೇಶದಿಂದ ಪ್ರದೇಶಕ್ಕೆ ಕೆಲ ನಿಮಿಷಗಳ ವ್ಯತ್ಯಾಸವನ್ನು ಹೊಂದಿದೆ’ ಎಂದು ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧಿಕಾರಿ ಸಂಜೀವ ದೇಶಪಾಂಡೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.