ADVERTISEMENT

ಸಹಕರಿಸುವ ನೆಪದಲ್ಲಿ ವಂಚನೆ: ಆರೋಪಿಯ ಬಂಧನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 16:25 IST
Last Updated 4 ನವೆಂಬರ್ 2020, 16:25 IST
ವೇಣುಗೋಪಾಲ ರೆಡ್ಡಿ
ವೇಣುಗೋಪಾಲ ರೆಡ್ಡಿ   

ಯಲ್ಲಾಪುರ: ಎ.ಟಿ.ಎಂ.ನಿಂದ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಕಾರ್ಡ್ ಬದಲಿಸಿ, ಹಣ ಡ್ರಾ ಮಾಡುತ್ತಿದ್ದ ಅಂತರರಾಜ್ಯ ವಂಚಕನನ್ನು ಯಲ್ಲಾಪುರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವೇಣುಗೋಪಾಲ ಕೃಷ್ಣ ರೆಡ್ಡಿ (50) ಬಂಧಿತ ಆರೋಪಿ.

2019ರ ಡಿ.17ರಂದು ಯಲ್ಲಾಪುರದ ನೂತನ ನಗರ ಜಡ್ಡಿಯ ಕೃಷ್ಣ ನಾಯ್ಕ ಎಂಬುವವರು, ಪಟ್ಟಣದ ಎಸ್.ಬಿ.ಐ ಎ.ಟಿ.ಎಂ.ನಲ್ಲಿ ತಮ್ಮ ಕಾರ್ಡ್‌ ಬಳಸಿ ಹಣ ಪಡೆದುಕೊಳ್ಳಲು ಯತ್ನಿಸಿದ್ದರು. ಆಗ ಅಲ್ಲಿಗೆ ಬಂದ ಆರೋಪಿಯು ಸಹಾಯ ಮಾಡುವ ನೆಪದಲ್ಲಿ ಅವರ ಕಾರ್ಡ್ ಮತ್ತು ಪಿನ್ ನಂಬರ್ ಪಡೆದುಕೊಂಡಿದ್ದ. ಕೊನೆಗೆ ಬೇರೊಂದು ಕಾರ್ಡ್‌ ನೀಡಿದ್ದ. ಅವರ ಕಾರ್ಡ್ ಬಳಸಿ ಡಿ.18 ಮತ್ತು 19ರಂದು ಒಟ್ಟು ₹ 40 ಸಾವಿರವನ್ನು ಬೇರೆ ಎ.ಟಿ.ಎಂ.ಗಳಿಂದ ಪಡೆದುಕೊಂಡಿದ್ದ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದರು. ಆತನಿಂದ ₹ 18,880 ನಗದನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಗೌರಿಬಿದನೂರು, ಮಧುಗಿರಿ, ಬಾಗೇಪಲ್ಲಿ, ಮಡಿವಾಳ, ಆಂಧ್ರಪ್ರದೇಶದ ಚಿತ್ತೂರಿನಲ್ಲೂ ಆರೋಪಿಯ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಹಳಿಯಾಳ, ಶಿರಸಿ ಹಾಗೂ ಚಿತ್ರದುರ್ಗ, ಬೀದರ್ ಜಿಲ್ಲೆಯ ಕೆಲವು ಕಡೆಯೂ ಕೃತ್ಯ ಎಸಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಡಿ.ವೈ.ಎಸ್‌.ಪಿ ಜಿ.ಟಿ.ನಾಯಕ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಸರ್ಕಲ್ ಇನ್‌ಸ್ಪೆಕ್ಟರ್ ಸುರೇಶ ಯಳ್ಳೂರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ ಗೌಡರ್, ಭೀಮಸಿಂಗ್ ಲಮಾಣಿ, ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಗಜಾನನ ನಾಯ್ಕ, ವಿನೋದ ರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.