ADVERTISEMENT

ನಗರಸಭೆ ಸದಸ್ಯೆ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 13:18 IST
Last Updated 5 ಸೆಪ್ಟೆಂಬರ್ 2019, 13:18 IST
ರಾಜೇಶ್ ಆರ್. ರುದ್ರಪಾಟಿ
ರಾಜೇಶ್ ಆರ್. ರುದ್ರಪಾಟಿ   

ಕಾರವಾರ: ‘ದಾಂಡೇಲಿ ನಗರಸಭೆಯ ಒಂದನೇ ವಾರ್ಡ್ (ಗಾಂಧಿನಗರ) ಸದಸ್ಯೆ ರುಕ್ಮಿಣಿ ಬಾಗಡೆ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಅವರ ವಿರುದ್ಧ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಆದೇಶವಾಗಿದ್ದರೂ ಸದಸ್ಯತ್ವ ರದ್ದು ಮಾಡದಿರುವುದು ಅನುಮಾನ ಮೂಡಿಸಿದೆ’ ಎಂದು ಅವರ ವಿರುದ್ಧ ಸ್ಪರ್ಧಿಸಿದ್ದ ರಾಜೇಶ್ ಆರ್. ರುದ್ರಪಾಟಿ ದೂರಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2018ರ ನಗರಸಭೆ ಚುನಾವಣೆಸಂದರ್ಭದಲ್ಲಿ ರುಕ್ಮಿಣಿ ತಮ್ಮನ್ನು ಪರಿಶಿಷ್ಟ ಜಾತಿಯವರು ಎಂದು ಪ್ರಮಾಣ ಪತ್ರ ನೀಡಿ ಮೀಸಲು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಆ ಸಂದರ್ಭದಲ್ಲೇಅವರು ಹಿಂದುಳಿದ ವರ್ಗ 1ಕ್ಕೆ ಸೇರಿದವರು ಎಂದುಆಕ್ಷೇಪಿಸಿದ್ದೆ. ನಂತರ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದಾಖಲೆಗಳೊಂದಿಗೆ ದಾವೆ ಹೂಡಿದ್ದೆ. ಈ ಬಗ್ಗೆ ವಿಚಾರಣೆ ನಡೆಸಿದ ಉಪ ವಿಭಾಗಾಧಿಕಾರಿ, ಜ.11ರಂದು ರುಕ್ಮಿಣಿ ಅವರ ಶಿಳ್ಳೆಕ್ಯಾತ ಜಾತಿ ಪ್ರಮಾಣಪತ್ರವನ್ನು ರದ್ದು ಪಡಿಸಿ ಆದೇಶಿಸಿದ್ದರು’ ಎಂದು ಹೇಳಿದರು.

‘2013ರ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು, ತಾವು ಅನಕ್ಷರಸ್ಥರು ಎಂದು ತಿಳಿಸಿದ್ದರು. ಆದರೆ, 2018ರ ಚುನಾವಣೆಯಲ್ಲಿತಾವು ಏಳನೇ ತರಗತಿ ವಿದ್ಯಾಭ್ಯಾಸ ಮಾಡಿರುವುದಾಗಿ ಪ್ರಮಾಣಪತ್ರ ನೀಡಿದ್ದಾರೆ. ಅವರು ವಿದ್ಯಾಭ್ಯಾಸ ಮಾಡಿರುವ ಬಗ್ಗೆಹಾಗೂ ಅವರು ಸುಳ್ಳುಪ್ರಮಾಣಪತ್ರಗಳನ್ನುನೀಡಿರುವ ಬಗ್ಗೆ ಹತ್ತಾರು ದಾಖಲೆಗಳಿವೆ’ ಎಂದರು.

ADVERTISEMENT

‘ಮೂಲತಃ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕಾಕನೂರು ಗ್ರಾಮದವರಾದ ಅವರು, ವಿವಾಹದ ಬಳಿಕ ದಾಂಡೇಲಿಯಲ್ಲಿ ವಾಸವಿದ್ದಾರೆ. ಶಾಲಾ ದಾಖಲಾತಿಯಲ್ಲೂ ಅವರು ಅಕ್ರಮವಾಗಿ ತಿದ್ದುಪಡಿ ಮಾಡಿದ್ದಾರೆ. ಈ ಮೂಲಕಪರಿಶಿಷ್ಟ ಜಾತಿಯವರಿಗೆ ಮೀಸಲಾದ ಸ್ಥಾನದಲ್ಲಿ ಸ್ಪರ್ಧಿಸಿ ಅನ್ಯಾಯ ಮಾಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದುಜಿಲ್ಲಾಧಿಕಾರಿಯನ್ನೂ ಒತ್ತಾಯಿಸಲಾಗಿದೆ. ಅವರು ಪ್ರಕರಣವನ್ನು ರಾಜ್ಯ ಹಂತದ ಅಧಿಕಾರಿಗಳಿಗೆ ರವಾನಿಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದ್ದಾರೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಶೀರ್ ಎಂ ಗಿರಿಯಾಲ್ ಹಾಗೂ ಲಕ್ಷ್ಮಣ ಸಂದಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.