ಶಿರಸಿ: ಶಿಕ್ಷಣ ಸಂಸ್ಥೆಗಳು ಏಳಿಗೆ ಸಾಧಿಸಲು ಕ್ರಿಯಾಶೀಲ ಆಡಳಿತ ಮಂಡಳಿಯ ಕೊಡುಗೆ ಅಗತ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ತಾಲ್ಲೂಕಿನ ಬನವಾಸಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ₹35 ಲಕ್ಷ ವೆಚ್ಚದಲ್ಲಿ ವಿವೇಕ ಯೋಜನೆ ಅಡಿ ನಿರ್ಮಾಣವಾದ ತರಗತಿ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಾಲೇಜು ಉನ್ನತಿಗೆ ಸಾಕಷ್ಟು ಕೊಡುಗೆ ನೀಡಲಾಗಿದೆ. ಅಭಿವೃದ್ಧಿ ನಿರಂತರವಾಗಿದ್ದು, ಇನ್ನು ಮುಂದೆ ಕೂಡ ಸಹಕಾರ ನೀಡಲಾಗುವುದು. ಬನವಾಸಿಯಲ್ಲಿ ಉತ್ತಮ ದರ್ಜೆ ಬಾಲಕಿಯರ ವಸತಿ ನಿಲಯ ಸ್ಥಾಪಿಸಲು ಕ್ರಮವಹಿಸಲಾಗಿದೆ’ ಎಂದು ಹೇಳಿದರು.
ನನ್ನ ಶಾಸಕತ್ವದ ಅವಧಿ 2028ರವರೆಗೆ ಇರಲಿದೆ. ಆವರೆಗೂ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗುತ್ತೇನೆ. ನಂತರ ಏನಾಗುತ್ತದೆ ಎದುರಿಸುತ್ತೇನೆ.ಶಿವರಾಮ ಹೆಬ್ಬಾರ, ಶಾಸಕ
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಿದ್ದಲಿಂಗಪ್ಪ ಉಗ್ರಾಣದ ಮಾತನಾಡಿ, ‘ಕಾಲೇಜು ಸುತ್ತ ಕಾಂಪೌಂಡ್, ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಹೆಚ್ಚುವರಿ ಕಂಪ್ಯೂಟರ್, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಚಟುವಟಿಕೆ ನಡೆಸಲು ಸಭಾಭವನ, ವಿದ್ಯಾರ್ಥಿಗಳಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಿದೆ’ ಎಂದರು.
ಬಾಗಿನ ಸಮರ್ಪಣೆ: ಉತ್ತಮ ಮಳೆಯ ಕಾರಣಕ್ಕೆ ಭರ್ತಿಯಾದ ಗುಡ್ನಾಪುರ ಕೆರೆ ಹಾಗೂ ವರದಾ ನದಿಗಳಿಗೆ ಶಾಸಕ ಶಿವರಾಮ ಹೆಬ್ಬಾರ ಅವರು ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಸಮಕ್ಷಮ ಬಾಗಿನ ಸಮರ್ಪಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಯೇಶಾ ಬಿಬಿ, ಉಪಾಧ್ಯಕ್ಷ ಸಿದ್ಧವೀರಪ್ಪ ನರೇಗಲ್, ಸದಸ್ಯರಾದ ರಹಮತ್ ಬಿ., ಪ್ರಮುಖರಾದ ಬಸವರಾಜ, ಸಿ.ಎಫ್. ನಾಯ್ಕ, ಬಸವರಾಜ ದೊಡ್ಮನಿ, ದ್ಯಾಮಣ್ಣ ದೊಡ್ಮನಿ, ಶಂಕರ ಗೌಡ, ಪ್ರಾಚಾರ್ಯ ದಿನೇಶ ಕೆ., ಅಶೋಕ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.