ಶಿರಸಿ: ರಾಮ ಮಂದಿರ ವಿಚಾರವನ್ನು ಸುಪ್ರೀಂಕೋರ್ಟ್ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಫೇಸ್ಬುಕ್ನಲ್ಲಿ ಪ್ರಕಟಿಸಿರುವಪೋಸ್ಟ್ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
‘ರಾಮ ಮಂದಿರದ ವಿಷಯದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ವರ್ತಿಸುತ್ತಿರುವ ರೀತಿ ಹಿಂದುಗಳಿಗೆ ತುಂಬಾ ನೋವುಂಟು ಮಾಡುತ್ತಿದೆ. ಕಳೆದ 5 ಶತಮಾನಗಳಿಂದ ರಾಮ ಮಂದಿರದ ಪುನರ್ನಿರ್ಮಾಣಕ್ಕೆ ಅದೆಷ್ಟೋ ತಲೆಮಾರುಗಳು ತಮ್ಮ ಜೀವವನ್ನೇ ತ್ಯಾಗ ಮಾಡಿವೆ.ಅಸಂಖ್ಯಾತ ಭಕ್ತರಿಗೆ ನ್ಯಾಯಾಲಯದ ಈ ವರ್ತನೆ ನಿಜಕ್ಕೂ ಆನ್ಯಾಯ ಉಂಟು ಮಾಡಿದೆ’ ಎಂದು ಹೇಳಿದ್ದಾರೆ.
‘ಇನ್ನೆಷ್ಟು ತಲೆಮಾರುಗಳು ನ್ಯಾಯ ಬೇಡುತ್ತಲೇ ಇರಬೇಕು? ನ್ಯಾಯ ಒದಗಿಸಿಕೊಡುವ ನಮ್ಮ ನ್ಯಾಯಾಲಯವೇ, 5 ಶತಮಾನಗಳ ನಂತರ ಸಹ ಈ ವಿಷಯವನ್ನು ಆದ್ಯತೆಯಲ್ಲಿ ಪರಿಗಣಿಸದಿರುವುದು, ಹಿಂದುಗಳ ಹೋರಾಟಕ್ಕೆ ಅವಮಾನ ಮಾಡಿ, ಅವರ ಭಾವನೆಗಳ ಜೊತೆ ಚಕ್ಕಂದವಾಡಿದಂತೆ’ ಎಂದು ವಿಶ್ಲೇಷಿಸಿದ್ದಾರೆ.
‘ನ್ಯಾಯಾಲಯಸೂಕ್ತ ಸಮಯದೊಳಗೆ ನ್ಯಾಯ ಒದಗಿಸದಿದ್ದರೆ ಸಮಾಜದಲ್ಲಿ ಉಂಟಾಗುವ ಕ್ಷೋಭೆಯನ್ನು ತಣಿಸಲು, ಸರ್ಕಾರಕ್ಕೆ ಅನ್ಯ ಮಾರ್ಗ ಶೋಧಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತದೆ. ನಾವೀಗ ಅಂತಹ ಸಂದಿಗ್ದತೆಯ ಪರಿಸ್ಥಿತಿಯಲ್ಲಿ ಇದ್ದೇವೆ’ ಎಂದು ಸುಗ್ರೀವಾಜ್ಞೆ ಹೊರಡಿಸಬೇಕಾದ ಅಥವಾ ಕಾನೂನು ರೂಪಿಸಬೇಕಾದ ಅನಿವಾರ್ಯತೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಈ ಕುರಿತು ತಮ್ಮ ಟ್ವಿಟ್ ಮಾಡಿರುವ ಅವರು, ‘ನ್ಯಾಯಾಲಯದ ಮಾರ್ಗ ಶಾಶ್ವತವಾಗಿ ಮುಚ್ಚಿಹೋದ ಕಾರಣ ಪರ್ಯಾಯಗಳ ಕುರಿತು ಯೋಚಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.