ಗೋಕರ್ಣ: ಬಹು ಬೇಡಿಕೆಯ ಗಂಗಾವಳಿ–ಮಂಜಗುಣಿ ಸೇತುವೆ ಕಾಮಗಾರಿ ಬಹುತೇಕ ಮುಗಿದಿದ್ದರೂ ಸಂಪರ್ಕ ಕಲ್ಪಿಸುವ ಕೂಡು ರಸ್ತೆ ನಿರ್ಮಾಣ ಇನ್ನೂ ಬಾಕಿ ಇದೆ. ಈ ನಡುವೆಯೂ ಕೆಲ ವಾಹನ ಸವಾರರು ಅಪಾಯಕಾರಿ ಸ್ಥಿತಿಯಲ್ಲಿಯೂ ವಾಹನ ಚಲಾಯಿಸಲಾರಂಭಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಸುಮಾರು ಏಳು ವರ್ಷಗಳ ಹಿಂದೆಯೇ ಗಂಗಾವಳಿ– ಮಂಜಗುಣಿ ಗ್ರಾಮಗಳನ್ನು ಸಂಪರ್ಕಿಸುವ ಸೇತುವೆ ಕಾಮಗಾರಿ ಆರಂಭಿಸಲಾಗಿತ್ತು. ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ ಎರಡೂ ಕಡೆ ಸಂಪರ್ಕ ರಸ್ತೆ ನಿರ್ಮಿಸಿಲ್ಲ. ಗಂಗಾವಳಿ ಭಾಗದಲ್ಲಿ ಮಣ್ಣು ತುಂಬಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ.
‘ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ತಾತ್ಕಾಲಿಕವಾಗಿ ಸಂಪರ್ಕ ರಸ್ತೆಗೆ ಮಣ್ಣನ್ನು ತುಂಬಲಾಗಿತ್ತು. ಈಗ ಅದೇ ರಸ್ತೆಯಲ್ಲಿಯೇ ನಾಲ್ಕು ಚಕ್ರದ ವಾಹನ ಸಂಚಾರಕ್ಕೂ ಅನುವು ಮಾಡಿಕೊಡಲಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜನಪ್ರತಿನಿಧಿಗಳು ನಾವು ಜನರ ಕೆಲಸ ಮಾಡಿದ್ದೇವೆ ಎನ್ನುವ ಕಾರಣಕ್ಕಾಗಿ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗುತ್ತಿದ್ದಾರೆ’ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಮಂಜುಗುಣಿ ಭಾಗದಲ್ಲಿ ಸಂಪರ್ಕ ರಸ್ತೆಗೆ ಅರೆಬರೆ ಮಣ್ಣು ಹಾಕಲಾಗಿದೆ. ಅದೇ ರಸ್ತೆಯಲ್ಲಿ ಈಗ ಎಲ್ಲಾ ವಾಹನ ಸಂಚಾರಕ್ಕೂ ಅನುವು ಮಾಡಿಕೊಟ್ಟಿರುವುದು ಅಪಘಾತಕ್ಕೆ ಕಾರಣವಾಗಬಹುದು’ ಎಂದು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಒತ್ತಾಯಿಸಿ ಸ್ಥಳೀಯರು ಅನೇಕ ಬಾರಿ ಪ್ರತಿಭಟನೆಯನ್ನೂ ಮಾಡಿದ್ದರು. ಮಳೆಗಾಲದ ಹಿನ್ನೆಲೆಯಲ್ಲಿ ಕಳೆದ ವರ್ಷ ತಾತ್ಕಾಲಿಕವಾಗಿ ದ್ವಿಚಕ್ರ ವಾಹನ ಸಂಚರಿಸಲು ಅನುಕೂಲ ಮಾಡಿಕೊಟ್ಟಿದ್ದರು.
‘ಸಂಪರ್ಕ ರಸ್ತೆ ನಿರ್ಮಿಸಬೇಕಿರುವ ಜಾಗಕ್ಕೆ ಸ್ವಲ್ಪ ಮಣ್ಣುತುಂಬಿ ಎಲ್ಲಾ ವಾಹನ ಸಂಚಾರಕ್ಕೂ ಮುಕ್ತವಾಗಿದೆ ಎಂದು ಹೇಳಿಕೆ ಕೊಡುವುದು ಸರಿಯಲ್ಲ. ಜನರನ್ನು ಮರಳು ಮಾಡುವ ಇಂತಹ ನಡೆ ಸರಿಯಲ್ಲ’ ಎಂದು ಹೆಸರೇಳಲು ಇಚ್ಛಿಸದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.