ADVERTISEMENT

ದೇಗುಲದಲ್ಲಿ ಕಳವು: ಆರೋಪಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 2:38 IST
Last Updated 24 ಅಕ್ಟೋಬರ್ 2020, 2:38 IST

ಕಾರವಾರ: ಭಟ್ಕಳ ತಾಲ್ಲೂಕಿನ ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣದಲ್ಲಿ ದೇಗುಲದ ಅರ್ಚಕನನ್ನು ಭಟ್ಕಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯಲ್ಲಾಪುರ ತಾಲ್ಲೂಕಿನ ಇಡಗುಂದಿಯ ಸತೀಶ ರಾಮಕೃಷ್ಣ ಭಟ್ ಸೆರೆ ಸಿಕ್ಕಿರುವ ಆರೋಪಿಯಾಗಿದ್ದಾರೆ. ಮುಂಡಳ್ಳಿಯ ದೇವಸ್ಥಾನದಲ್ಲಿ ಅರ್ಚಕರಾಗಿದ್ದ ಅವರು, ಕಳವು ಪ್ರಕರಣದ ನಂತರ ಸಾಗರದಲ್ಲಿರುವ ಮಾಹಿತಿಯನ್ನು ಪೊಲೀಸರು ಪಡೆದುಕೊಂಡಿದ್ದರು. ಅಲ್ಲಿಗೆ ತೆರಳಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು.

ದೇವಸ್ಥಾನದ ಸುಮಾರು ₹ 60 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಗರ್ಭಗುಡಿಯಲ್ಲಿದ್ದ ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಲಾಗಿತ್ತು. ನವರಾತ್ರಿ ಉತ್ಸವದ ಸಂದರ್ಭದಲ್ಲಿ ದೇವಿಯ ವಿಗ್ರಹಕ್ಕೆ ಅಲಂಕಾರ ಮಾಡಲೆಂದು ಪೆಟ್ಟಿಗೆ ತೆರೆಯಲು ಮುಂದಾದಾಗ ಪೆಟ್ಟಿಗೆಯ ಬೀಗದ ಕೈ ಸಿಕ್ಕಿರಲಿಲ್ಲ. ಈ ಬಗ್ಗೆ ಇತರ ಅರ್ಚಕರಿಗೆ ಮಾಹಿತಿ ಇರಲಿಲ್ಲ.

ADVERTISEMENT

ಸತೀಶ ಭಟ್ ಅವರಿಗೆ ಕರೆ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಬಳಿಕ ಪೆಟ್ಟಿಗೆಯ ಬೀಗವನ್ನು ಒಡೆದು ನೋಡಿದಾಗ ಆಭರಣ ಕಳವಾಗಿದ್ದು ಗೊತ್ತಾಗಿತ್ತು. ಈ ಸಂಬಂಧ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಹೇಮಂತ ದುರ್ಗಪ್ಪ ಮೊಗೇರ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಎ.ಎಸ್.ಪಿ ನಿಖಿಲ್ ಬುಳ್ಳಾವರ ತನಿಖಾ ತಂಡವನ್ನು ರಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.