ಕಾರವಾರ: ‘ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಸಮೀಕ್ಷೆ ವೇಳೆ ಬಾಂದಿ ಸಮುದಾಯದ ಜನರು ಬಾಂಧಿ ಅಥವಾ ಬಂಡಿ ಎಂದು ನಮೂದಿಸದೆ ಬಾಂದಿ ಎಂದೇ ನಮೂದಿಸಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಉತ್ತರ ಕನ್ನಡ ಜಿಲ್ಲಾ ಬಾಂದಿ ಸಮಾಜೋನ್ನತಿ ಸಂಘದ ಅಧ್ಯಕ್ಷ ಕೃಷ್ಣಾನಂದ ಬಾಂದೇಕರ ಹೇಳಿದರು.
‘ರಾಜ್ಯದಲ್ಲಿ ಉತ್ತರ ಕನ್ನಡ, ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಮಾತ್ರವೇ ಹೆಚ್ಚಿನ ಸಂಖ್ಯೆಯಲ್ಲಿರುವ ಬಾಂದಿ ಸಮುದಾಯಕ್ಕೆ ಹಿಂದುಳಿದ ಜಾತಿ ಪ್ರಮಾಣಪತ್ರ ಸಿಗುತ್ತಿಲ್ಲ. ಅಧಿಕಾರಿಗಳ ಕಣ್ತಪ್ಪಿನಿಂದಾಗಿ ಈ ಹಿಂದೆ ಬಂಡಿ ಎಂದು ನಮೂದಿಸಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಿದ್ದರು. ಬಳಿಕ ಸುಳ್ಳು ಪ್ರಮಾಣಪತ್ರ ಪಡೆದ ಪ್ರಕರಣ ದಾಖಲಿಸಿದ್ದರು. ಇಂತಹ ಶೋಷಣೆಯನ್ನು ಸಮುದಾಯ ನಿರಂತರವಾಗಿ ಅನುಭವಿಸಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ಬಾಂದಿ ಸಮುದಾಯ ಸಾಮಾಜಿಕವಾಗಿ ಹಿಂದುಳಿದಿದ್ದು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಬೇಕಿದೆ. ಆದರೆ, ಹಿಂದುಳಿದ ವರ್ಗಗಳ ಆಯೋಗದ ಜಾತಿ ಪಟ್ಟಿಯಲ್ಲಿ ಬಾಂದಿ ಸಮುದಾಯ ಬಿಟ್ಟುಹೋಗಿದೆ. ಈ ಹಿಂದೆ ಜಯಪ್ರಕಾಶ ಹೆಗ್ಡೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆಯೋಗಕ್ಕೆ ಈ ಬಗ್ಗೆ ದೂರು ನೀಡಲಾಗಿತ್ತು. ಈವರೆಗೂ ಆಯೋಗವು ತಪ್ಪು ಸರಿಪಡಿಸಿಲ್ಲ’ ಎಂದರು.
ರಾಮಕೃಷ್ಣ ಲೋಲೇಕರ, ನಾಗೇಶ ಯಲ್ಲಾಪುರ, ಪ್ರಮೋದ ಬಾಂದೇಕರ, ಚಂದ್ರಕಾಂತ ಬಾಂದೇಕರ, ಬಾಬು ಬಾಂದೇಕರ, ದತ್ತಾನಂದ ಬಾಂದೇಕರ, ಮನೋಜ ಬಾಂದೇಕರ, ರಾಜಾ ಬಾಂದೇಕರ, ಸಂಧ್ಯಾ ಬಾಡಕರ, ಸಂಜಯ ಬಾಡಕರ, ಸದಾನಂದ ಬಾಂದೇಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.