ಶಿರಸಿ: ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ತಾಲ್ಲೂಕಿನ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಮಂಗಳವಾರ ಶ್ರೀಕೃಷ್ಣನಿಗೆ ತುಳಸಿ ಅರ್ಚನೆ ಮಾಡಲಾಯಿತು. ಮಠದ ರಾಜರಾಜೇಶ್ವರಿ ಮಹಾಪಾಠಶಾಲೆಯ ಅಧ್ಯಾಪಕರು, ವಿದ್ಯಾರ್ಥಿಗಳು ಅರ್ಚನೆಯ ಕಾರ್ಯ ನೆರವೇರಿಸಿದರು.
ಕಾರ್ಗಿಲ್ ಯುದ್ಧ ನಡೆದ ವರ್ಷದಿಂದ ಕೃಷ್ಣನಿಗೆ ತುಳಸಿ ಅರ್ಚನೆ ಪದ್ಧತಿ ಪ್ರತಿವರ್ಷ ಕೃಷ್ಣಾಷ್ಟಮಿಯಲ್ಲಿ ನಡೆದುಕೊಂಡು ಬರುತ್ತಿದೆ. ದೇಶದ ಯೋಧರಿಗೆ ತಮ್ಮ ಕಾರ್ಯಚಟುವಟಿಕೆಯಲ್ಲಿ ಹೆಚ್ಚಿನ ಧೈರ್ಯ, ಸ್ಥೈರ್ಯ, ಸಾಮರ್ಥ್ಯ ದೊರೆಯಲೆಂದು ಪ್ರಾರ್ಥಿಸಿ, ವಿಶೇಷ ಪೂಜೆಯನ್ನು ಕೃಷ್ಣನಿಗೆ ಸಮರ್ಪಿಸಲಾಗುತ್ತದೆ. ಕೇಶವ ಹೆಗಡೆ ದಂಪತಿ ಯಜಮಾನರಾಗಿ ಪೂಜೆ ನೆರವೇರಿಸಿದರು.
ಮಧ್ಯಾಹ್ನ ವಿದ್ವಾಂಸ ಬಾಲಚಂದ್ರ ಶಾಸ್ತ್ರಿ ಅವರು ಶ್ರೀಕೃಷ್ಣ ಜನ್ಮ ಪುರಾಣ ಪ್ರವಚನ ನಡೆಸಿಕೊಟ್ಟರು. ಸಂಜೆ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.