
ಶಿರಸಿ: 'ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಯು ಉತ್ತರ ಕನ್ನಡ ಭಾಗದ ಕೃಷಿ ಮತ್ತು ಕುಡಿಯುವ ನೀರಿನ ಮೂಲಕ್ಕೆ ಧಕ್ಕೆ ತರಲಿದ್ದು, ಇಂತಹ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಬೆಂಬಲಿಸಬಾರದು’ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕರೆ ನೀಡಿದರು.
ತಾಲ್ಲೂಕಿನ ಬರೂರಿನ ಶ್ರೀಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ಗುರುವಾರ ಹಿಂದೂ ಸಂಚಾಲನಾ ಸಮಿತಿ ಆಯೋಜಿಸಿದ್ದ ಹಿಂದೂ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ‘ಪರಕೀಯರಿಗೆ ನೀರು ನೀಡಬಾರದು ಎಂಬ ಸಂಕುಚಿತ ಮನೋಭಾವ ನಮ್ಮದಲ್ಲ. ಆದರೆ, ಇಲ್ಲಿನ ನದಿಗಳನ್ನು ತಿರುಗಿಸುವುದರಿಂದ ಸ್ಥಳೀಯ ಪರಿಸರ, ಕೃಷಿ ಹಾಗೂ ಮೀನುಗಾರಿಕೆ ಮೇಲೆ ಗಂಭೀರ ದುಷ್ಪರಿಣಾಮ ಬೀರಲಿದೆ. ಇತರ ಜಿಲ್ಲೆಗಳಲ್ಲಿನ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಇಂತಹ ನದಿ ತಿರುವುಗಳ ಅವಶ್ಯಕತೆಯೇ ಇರುವುದಿಲ್ಲ. ನಮ್ಮ ಬದುಕಿನ ಆಧಾರವಾಗಿರುವ ನದಿಗಳನ್ನು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ವಕ್ತಾರ ಅಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ‘ಜಾತಿ, ಭಾಷೆ ಹಾಗೂ ಪ್ರಾಂತ್ಯಗಳ ನಡುವಿನ ಒಡಕು ನಿವಾರಣೆಯಾಗಿ ರಾಷ್ಟ್ರದ ಹಿತದೃಷ್ಟಿಯಿಂದ ನಾವೆಲ್ಲರೂ ಒಂದಾಗಬೇಕು. ಕನಿಷ್ಠ ವಾರಕ್ಕೊಮ್ಮೆ ಕುಟುಂಬದವರೆಲ್ಲರೂ ಒಟ್ಟಾಗಿ ಭಜನೆ ಮಾಡುವ ಮೂಲಕ ಸಂಸ್ಕೃತಿಯನ್ನು ಉಳಿಸಬೇಕು. ನಮ್ಮ ಮನೆಗಳೇ ವಿದ್ಯಾಲಯಗಳಾಗಬೇಕು ಹಾಗೂ ಸ್ವದೇಶಿ ಭಾವನೆ ನಮ್ಮಲ್ಲಿ ಬೆಳೆಯಬೇಕು’ ಎಂದರು.
ಇದೇ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧರನ್ನು ಶ್ರೀಗಳು ಗೌರವಿಸಿದರು. ಕಾರ್ಯಕ್ರಮಕ್ಕೂ ಮುನ್ನ ಭಾರತಾಂಬೆ ಭಾವಚಿತ್ರ ಹೊತ್ತ ಶೋಭಾ ಯಾತ್ರೆ ಹಾಗೂ ವಿಶೇಷ ಡೊಳ್ಳು ಕುಣಿತದೊಂದಿಗೆ ಶ್ರೀಗಳನ್ನು ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಮಾರಿಕಾಂಬಾ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಭಾಗೀರಥಿ ಜೋಶಿ ಇದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಚಾರುಚಂದ್ರ ಶಾಸ್ತ್ರಿ ಸ್ವಾಗತಿಸಿದರು. ಅಣ್ಣಪ್ಪ ನಾಯ್ಕ ಹಲಸಿನಕೈ ನಿರ್ಣಯ ಮಂಡಿಸಿದರು. ಗಣಪತಿ ಭಟ್ ಬೆಳಖಂಡ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.