ಶಿರಸಿ: ಪುಟಾಣಿ ತುಳಸಿ ಹೆಗಡೆಯಿಂದ ‘ಪರಿವರ್ತನೆ ಜಗದ ನಿಯಮ’ ಯಕ್ಷರೂಪಕ, ನೈದಿಲೆ ಹೆಗಡೆ ಹೊರಾಲೆ ಗಾಯನ, ಕಲಾವಿದೆ ಹುಬ್ಬಳ್ಳಿಯ ಸುಜನಿ ಜಗನ್ನಾಥ ಎಂ.ಪಿ ಭರತನಾಟ್ಯ, ಶ್ವೇತಾ ಅರೆಹೊಳೆ ಅವರ ನಾಟ್ಯ ರೂಪಕ, ಸತೀಶ ಎಲೆಸರ ಅವರ ರಂಗಚಿತ್ರ, ವಾಗ್ಮಿ ಡಾ.ಗುರುರಾಜ ಕರಜಗಿ ಅವರ ವಿಶೇಷ ಉಪನ್ಯಾಸದೊಂದಿಗೆ ತಾಲ್ಲೂಕಿನ ಬೆಟ್ಟಕೊಪ್ಪದಲ್ಲಿ ‘ನಮ್ಮನೆ ಹಬ್ಬ’ ಗುರುವಾರ ಸಂಜೆ ನಡೆಯಿತು.
‘ಮಕ್ಕಳು ಹೇಳಿದಂತೆ ಮಾಡುವದಿಲ್ಲ. ಮಾಡಿದಂತೆ ಮಾಡುತ್ತಾರೆ. ಮಕ್ಕಳಲ್ಲಿ ನಾವು ಅಂತಹ ಮೌಲ್ಯವನ್ನು ಬೆಳೆಸಬೇಕು. ಶುದ್ಧತೆ ಎನ್ನುವುದು ಮಹಾನಗರದಲ್ಲಿಲ್ಲ, ಅದು ಗ್ರಾಮೀಣ ಬದುಕಿನಲ್ಲಿದೆ. ಮರಳಿ ಮಣ್ಣಿಗೆ ಬರಬೇಕಾದ ಅಗತ್ಯವಿದೆ. ನಿಸರ್ಗದ ನಡುವೆ ಬದುಕಿನಲ್ಲಿ ನೆಮ್ಮದಿ ಕಾಣುವದು ಸಾಧನೆ. ಸಣ್ಣ ಸಣ್ಣ ಮೌಲ್ಯಗಳೂ ಪಟ್ಟಣದಲ್ಲಿ ಕಳೆದುಹೋಗುತ್ತಿವೆ’ ಎಂದು ಗುರುರಾಜ ಕರಜಗಿ ಹೇಳಿದರು.
ವಿಶ್ವಶಾಂತಿ ಟ್ರಸ್ಟ್ ಅಧ್ಯಕ್ಷೆ ಭುವನೇಶ್ವರ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾವಿದ ಗಣಪತಿ ಹೆಗಡೆ ತೋಟಿಮನೆ, ಚಂಡೆವಾದಕ ವಿಘ್ನೇಶ್ವರ ಗೌಡ, ಕಲಾವಿದೆ ಶ್ವೇತಾ ಅರೆಹೊಳೆ ಅವರನ್ನು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ದಂಟ್ಕಲ್, ಹಿರಿಯ ಸಹಕಾರಿ ಸೀತಾರಾಮ ಹೆಗಡೆ ಗೌರವಿಸಿದರು.
ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿದರು. ಡಾ. ಕಾವೇಂಶ್ರೀ, ಗಾಯತ್ರೀ ರಾಘವೇಂದ್ರ, ಆರತಿ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ಅನಂತ ಭಟ್ಟ ಹುಳಗೋಳ ನಿರೂಪಿಸಿದರು. ರಮೇಶ ಹಳೆಕಾನಗೋಡ ವಂದಿಸಿದರು.
ಪ್ರೊ. ಎಂ.ಎ.ಹೆಗಡೆ ಸಾಹಿತ್ಯ, ನಿರ್ದೇಶನದ ‘ಪರಿವರ್ತನೆ ಜಗದ ನಿಯಮ’ ವಿಶ್ವಶಾಂತಿ ಸರಣಿಯ ನಾಲ್ಕನೇ ಯಕ್ಷನೃತ್ಯ ರೂಪಕವನ್ನು ತುಳಸಿ ಹೆಗಡೆ, ಸುಮಾರು ಒಂದೂಕಾಲು ತಾಸು ಪ್ರದರ್ಶನ ನೀಡಿದಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.