ಶಿರಸಿ: ಶಿರಸಿ ಸಿದ್ದಾಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ನೂರಾರು ಬೆಂಬಲಿಗರ ಜೊತೆ ತೆರೆದ ಜೀಪ್ ನಲ್ಲಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಕೆಗೆ ಆಗಮಿಸಿದರು.
ಸೋಮವಾರ ನಗರದ ಮಾರಿಕಾಂಬಾ ದೇವಾಲಯ, ದೊಡ್ಡ ಗಣಪತಿ ದೇವಶಲಯಗಳಲ್ಲಿ ಪೂಜೆ ಸಲ್ಲಿಸಿದ ಭೀಮಣ್ಣ ನಾಯ್ಕ ಅವರು ಝೂ ಸರ್ಕಲ್ ಬಳಿಯಿಂದ ಚುನಾವಣಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಆಡಳಿತದಲ್ಲಿ ಇರುವ ಶಾಸಕರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಏನು? ಸಚಿವರು, ವಿಧಾನಸಭಾಧ್ಯಕ್ಷರಾಗಿ ನಿಮ್ಮ ಕೊಡುಗೆ ಎಷ್ಟು? ಎಂಬುದನ್ನು ಜನತೆಗೆ ಹೇಳಬೇಕು ಎಂದರು. ಕ್ಷೇತ್ರದ ಕಟ್ಟಕಡೆಯ ಹಳ್ಳಿಯೂ ಅಭಿವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ನಡೆಸಬೇಕು. ಆದರೆ ಬಿಜೆಪಿ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಬೆಲೆ ಏರಿಕೆ, ನಿರುದ್ಯೋಗದಂಥ ಸಮಸ್ಯೆ ಹೆಚ್ಚಿದೆ. ಈ ಎಲ್ಲ ಕಾರಣಕ್ಕೆ ಇಂದು ಬಿಜೆಪಿ ಜನತೆಗೆ ಬೇಡವಾಗಿದೆ. ಆ ಪಕ್ಷದ ಪ್ರಮುಖರೇ ಕಾಂಗ್ರೆಸ್ ತತ್ವ, ಸಿದ್ಧಾಂತ ಒಪ್ಪಿ ಬಿಜೆಪಿ ಮುಕ್ತ ಕರ್ನಾಟಕಕ್ಕೆ ಸಹಕಾರ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಬಹುಮತ ಪಡೆಯಲಿದೆ. ಜಿಲ್ಲೆಯಲ್ಲಿ 6 ಕ್ಷೇತ್ರವೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದರು.
ನಂತರ ಪಕ್ಷದ ಪ್ರಮುಖರಾದ ವಸಂತ ನಾಯ್ಕ, ರವೀಂದ್ರ ನಾಯ್ಕ, ಜಗದೀಶ ಗೌಡ, ಪತ್ನಿ ಗೀತಾ ನಾಯ್ಕ ಜೊತೆಗೂಡಿ ನಾಮಪತ್ರ ಸಲ್ಲಿಕೆಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.