ADVERTISEMENT

ಶಾಸಕ ಯತ್ನಾಳ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ: ಸಚಿವ ಶಿವರಾಮ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 7 ಮೇ 2022, 14:16 IST
Last Updated 7 ಮೇ 2022, 14:16 IST
ಶಿವರಾಮ ಹೆಬ್ಬಾರ
ಶಿವರಾಮ ಹೆಬ್ಬಾರ   

ಮುಂಡಗೋಡ: ‘₹ 2,500 ಕೋಟಿ ಹಣ ಇದ್ದರೆ ಮುಖ್ಯಮಂತ್ರಿ ಆಗಬಹುದು ಎಂಬ ಶಾಸಕ ಬಸನಗೌಡ ಪಾಟೀಲ ಅವರ ಹೇಳಿಕೆಯು, ಅವರ ಹಿರಿತನಕ್ಕೆ ಹಾಗೂ ಯೋಗ್ಯತೆಗೆ ಗೌರವಯುತವಲ್ಲ. ಬಿ.ಜೆ.ಪಿ ರಾಷ್ಟ್ರೀಯ ನಾಯಕತ್ವದ ಬಗ್ಗೆ ಯಾರೇ ಆಗಲಿ ಅಷ್ಟು ಹಗುರವಾಗಿ ಮಾತನಾಡುವುದು ಸಮಂಜಸವಲ್ಲ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಶಾಸಕ ಯತ್ನಾಳ ಅವರು ಯಾವ ಅರ್ಥದಲ್ಲಿ ಯಾವ ಮಾತು ಹೇಳುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ಅವರ ಹೇಳಿಕೆಯ ಅರ್ಥ ಅವರಿಗೆ ಮಾತ್ರ ಗೊತ್ತು. ಗೋಕಾಕದಲ್ಲಿ ಒಂದು ಹೇಳಿಕೆ, ವಿಜಯಪುರದಲ್ಲಿ ಒಂದು ಹೇಳಿಕೆ, ಬೆಳಗಾವಿಯಲ್ಲಿ ಮತ್ತೊಂದು ಹೇಳಿಕೆ ನೀಡುತ್ತಾ ಹೋದರೆ, ಪಕ್ಷದ ನಾಯಕತ್ವಕ್ಕೆ ಮುಜುಗರ ಉಂಟು ಮಾಡುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದರು.

‘ಕಾಂಗ್ರೆಸ್‌ ಪಕ್ಷವು ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದನ್ನೇ ಸತ್ಯ ಎಂದು ನಂಬಿಸಲು ಹೊರಟಿದೆ. ಪಿ.ಎಸ್‌.ಐ ನೇಮಕಾತಿ ಹಗರಣದಲ್ಲಿ ಸಚಿವ ಡಾ.ಅಶ್ವತ್ಥನಾರಾಯಣ ಅವರ ಮೇಲೆ ವಿರೋಧ ಪಕ್ಷ ಮಾಡುತ್ತಿರುವ ಆರೋಪ ಕಪೋಲಕಲ್ಪಿತಹಾಗೂ ಆಧಾರ ರಹಿತವಾಗಿದೆ. ಪಿ.ಎಸ್‌.ಐ ನೇಮಕಾತಿ ವಿಚಾರದಲ್ಲಿ ಕಾಂಗ್ರೆಸ್‌ ಮಾಡುತ್ತಿರುವ ಸುಳ್ಳು ಆರೋಪಗಳನ್ನು ಎದುರಿಸುವ ಶಕ್ತಿ ಬಿ.ಜೆ.ಪಿ.ಗಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.