ಕುಮಟಾ: ಅವರು ಅರಣ್ಯ ಇಲಾಖೆಯ ಕರ್ತವ್ಯದಿಂದ ನಿವೃತ್ತರಾದರು. ಆದರೆ, ಕಾಡಿನ ಮೇಲಿನ ಮೋಹದಿಂದ ಮನೆಯಲ್ಲೇ ಗಿಡಗಳನ್ನು ಬೆಳೆಸಿದರು. ಕಡಿಮೆ ಜಾಗದಲ್ಲಿ ಜಾಸ್ತಿ ಗಿಡಗಳನ್ನು ಹೊಂದಲು ಅವರು ಬೊನ್ಸಾಯ್ ಕೃಷಿ ಪದ್ಧತಿಯನ್ನು ಅನುಸರಿಸಿದರು.
ತಾಲ್ಲೂಕಿನ ಕಲ್ಲಬ್ಬೆ ಗ್ರಾಮದ ಶಂಭುಮನೆ ಕೇರಿಯ ಲಕ್ಷ್ಮೀನಾರಾಯಣ ಹೆಗಡೆ, ವಲಯ ಅರಣ್ಯಾಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಈಗ 50ಕ್ಕೂ ಹೆಚ್ಚು ಜಾತಿ ಸುಮಾರು 227 ಬೊನ್ಸಾಯ್ ಗಿಡಗಳನ್ನು ಬೆಳೆಸಿದ್ದಾರೆ. ಪುಟ್ಟ ಬೊನ್ಸಾಯ್ ವನದಲ್ಲಿ ಇಡೀ ಕಾಡನ್ನು ಕಾಣುತ್ತಿದ್ದಾರೆ.
ನಿವೃತ್ತಿಯ ನಂತರ ಮನೆಯಲ್ಲಿಈ ಕೃಷಿ ಆರಂಭಿಸಿದ ಅವರು, ಗಿಡಗಳಿಗೆಬೇಕಾಗುವ ಕುಡಿಕೆಯನ್ನೂ ತಾವೇ ತಯಾರಿಸುತ್ತಾರೆ. 50ಕ್ಕೂ ಹೆಚ್ಚು ಶಾಲೆ, ಕಾಲೇಜುಗಳಲ್ಲಿಬೊನ್ಸಾಯ್ ಕೃಷಿ ಬಗ್ಗೆ ಉಚಿತವಾಗಿ ಉಪನ್ಯಾಸ ನೀಡಿದ್ದಾರೆ.
‘ಹೆಚ್ಚು ಆಮ್ಲಜನಕ ನೀಡುವ ಆಲ, ಅಶ್ವತ್ಥ, ಅತ್ತಿ ಗಿಡಗಳ ಮೂಲಧರ್ಮ ಉಳಿಸಿಕೊಂಡು ಅವುಗಳನ್ನು ಬೊನ್ಸಾಯ್ಮಾದರಿಯಲ್ಲಿ ಬೆಳೆಸುತ್ತಿದ್ದೇನೆ. ಅವುಗಳನ್ನು ಮನೆಯಲ್ಲೇ ಬೆಳೆದರೆ ಆನೆಯನ್ನು ಕನ್ನಡಿಯಲ್ಲಿ ನೋಡಿದ ಅನುಭವವಾಗುತ್ತದೆ’ ಎಂದು ಮುಗುಳ್ನಗುತ್ತಾರೆ.
‘ಬೊನ್ಸಾಯ್’ ಜಪಾನ್ ಮೂಲದ ಶಬ್ದ. ‘ಬೋನ್’ ಎಂದರೆ ಮಣ್ಣಿನ ಕುಡಿಕೆ. ‘ಸಾಯ್’ ಎಂದರೆ ವೃಕ್ಷ ಎಂದು ಅರ್ಥ. ಎಕರೆಗಟ್ಟಲೆ ಜಾಗ ಆವರಿಸಿಕೊಂಡು ಬೆಳೆದು ಸುಮಾರು 250 ವರ್ಷಗಳ ಕಾಲ ಬದುಕುವ ಆಲದ ಮರವನ್ನು ಕೇವಲ ಒಂದು ಅಡಿ ಅಗಲ, ಒಂದು ಅಡಿ ಎತ್ತರದ ಮಣ್ಣಿನ ಕುಡಿಕೆಯಲ್ಲಿಆರುವರ್ಷ ಬೆಳೆಸಬಹುದು.
‘ಅವುಗಳ ಟೊಂಗೆ, ಬೇರುಗಳನ್ನು ಕತ್ತರಿ ಇನ್ನಷ್ಟು ಕುಬ್ಜವಾಗುವಂತೆ ಮಾಡಿದರೆ ಇನ್ನೂ 15– 20 ವರ್ಷ ಬದುಕುತ್ತವೆ. ಕುಬ್ಜ ಆಲದ ಬೊನ್ಸಾಯ್ ಗಿಡಕ್ಕೆ ಮಾರುಕಟ್ಟೆಯಲ್ಲಿ ₹ 40 ಸಾವಿರದವರೆಗೆ ಬೆಲೆಯಿದೆ.ಬೊನ್ಸಾಯ್ವನ ನೋಡಲು ಬರುವ ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಅದರ ಕುಂಡವನ್ನು ಕೇವಲ ₹7 ರೂಪಾಯಿ ವೆಚ್ಚದಲ್ಲಿ ತಯಾರಿಸುವುದನ್ನೂ ಕಲಿಸುತ್ತೇನೆ’ ಎಂದು ಅವರು ಹೇಳುತ್ತಾರೆ.
ಸಾಕಷ್ಟು ಆಮ್ಲಜನಕ ಉತ್ಪತ್ತಿ: ‘ಬೊನ್ಸಾಯ್ ಮಾದರಿಯಲ್ಲಿ ಆಲ, ಅತ್ತಿ, ಅಶ್ವತ್ಥ ಗಿಡಗಳನ್ನು ಮನೆಯಲ್ಲಿ ಬೆಳೆದರೆ ನಮಗೆ, ಸುತ್ತಮುತ್ತ ಸಾಕಾಗುವಷ್ಟು ಆಮ್ಲಜನಕ ಉತ್ಪತ್ತಿಯಾಗುತ್ತದೆ. ಗಿಡಗಳ ಗುಣಲಕ್ಷಣ ಹಾಗೂ ಮಹತ್ವದ ಅನುಸಾರ ಅವುಗಳನ್ನು ರಾಶಿವನ, ನವಗ್ರಹ ವನ, ಸಪ್ತರ್ಶಿ ವನ, ಪಂಚವನ, ಪಂಚವೃಕ್ಷ ಹಾಗೂ ಶಿವಪಂಚಾಯತ ವನ ಎಂದು ವರ್ಗಿಕರಿಸಲಾಗಿದೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.