ಕಾರವಾರ: ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಯ ಬಹುವರ್ಷಗಳ ಬೇಡಿಕೆ ಈಡೇರುವ ಸಮಯ ಸನ್ನಿಹಿತವಾಗುವ ಭರವಸೆ ಮೂಡಿದ್ದು, ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಹೊಸ ಕಟ್ಟಡದಲ್ಲಿ ರೇಡಿಯೋಥೆರಪಿ ಉಪಕರಣಗಳ ಅಳವಡಿಕೆಗೆ ಅನುಮತಿ ಸಿಕ್ಕಿದೆ.
ಕ್ರಿಮ್ಸ್ ಆವರಣದಲ್ಲಿ 450 ಹಾಸಿಗೆಯ ಹೊಸ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತ ತಲುಪಿದ್ದು, ಅದೇ ಕಟ್ಟಡದ ಹಿಂಭಾಗದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಿರುವ ಯಂತ್ರೋಪಕರಣಗಳ ಅಳವಡಿಕೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಮೌಖಿಕ ಒಪ್ಪಿಗೆ ಸಿಕ್ಕಿದೆ ಎಂದು ಕ್ರಿಮ್ಸ್ ಮೂಲಗಳು ತಿಳಿಸಿವೆ.
‘ಈಚೆಗಷ್ಟೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ವಿಧಾನ ಪರಿಷತ್ನಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ಕಾರವಾರದಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಲಿಖಿತ ಉತ್ತರ ನೀಡಿದ್ದರು. ಬಳಿಕ ಬೆಳಗಾವಿಯಲ್ಲಿ ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಕ್ಯಾನ್ಸರ್ ಚಿಕಿತ್ಸೆ ವಿಭಾಗ ಆರಂಭಿಸುವ ಸಿದ್ಧತೆ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆ ವಿಭಾಗ ಆರಂಭಿಸಲು ಸಿದ್ಧತೆಗಳು ನಡೆದಿದ್ದು ಅಗತ್ಯ ಅನುಮತಿಗಳು ಸಿಕ್ಕರೆ ಮುಂದಿನ 5–6 ತಿಂಗಳಿನಲ್ಲಿ ವಿಭಾಗ ಆರಂಭಿಸಬಹುದು ಎಂಬ ನಿರೀಕ್ಷೆ ಇದೆ.ಡಾ.ಗಜಾನನ ನಾಯಕ, ಕ್ರಿಮ್ಸ್ ನಿರ್ದೇಶಕ
‘ಕ್ಯಾನ್ಸರ್ ಚಿಕಿತ್ಸೆ ವಿಭಾಗ ಆರಂಭಿಸಲು ರೆಡಿಯೋಥೆರಪಿಗೆ ಅಗತ್ಯವಿರುವ ಯಂತ್ರೋಪಕರಣಗಳು, ವಿಕಿರಣ ಹರಡದಂತೆ ತಡೆಯುವ ಬಂಕರ್, ಎಂ.ಆರ್.ಐ ಸ್ಕ್ಯಾನಿಂಗ್ ಅಗತ್ಯವಿದೆ. ಬಂಕರ್ ಹೊರತುಪಡಿಸಿ ಉಳಿದ ಯಂತ್ರೋಪಕರಣಗಳ ಖರೀದಿಗೆ ಸರ್ಕಾರದಿಂದ ಒಪ್ಪಿಗೆ ದೊರೆತಿದೆ. ರೇಡಿಯೋಗ್ರಫಿ ಯಂತ್ರದ ಬಳಕೆಗೆ ಆಟೊಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್ನ ವಿಕಿರಣ ಸುರಕ್ಷಾ ವಿಭಾಗದಿಂದ ಎರಡು ಹಂತದ ಅನುಮತಿ ದೊರೆತಿದ್ದು, ಅಂತಿಮ ಒಪ್ಪಿಗೆ ಸಿಗುವುದು ಬಾಕಿ ಇದೆ’ ಎಂದು ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ನಾಯಕ ತಿಳಿಸಿದ್ದಾರೆ.
‘ಕ್ಯಾನ್ಸರ್ ಚಿಕಿತ್ಸೆ ವಿಭಾಗ ಆರಂಭಿಸಲು ಹೊಸ ಕಟ್ಟಡದಲ್ಲಿ ಸ್ಥಳಾವಕಾಶ ಗುರುತಿಸಲಾಗಿದೆ. ಅಲ್ಲಿ ಅಳವಡಿಸಲು ಅತ್ಯಾಧುನಿಕ ಸಿಟಿ ಸ್ಕ್ಯಾನ್ ಯಂತ್ರ, ಕೆಲವು ಯಂತ್ರೋಪಕರಣಗಳ ಪೂರೈಕೆಯೂ ಆಗಿದೆ’ ಎಂದೂ ಹೇಳಿದರು.
450 ಹಾಸಿಗೆ ಸಾಮರ್ಥ್ಯದ ಕಟ್ಟಡಕ್ಕೆ ಈ ಹಿಂದೆ ₹150 ಕೋಟಿ ಮಂಜೂರಾಗಿತ್ತು. ಸೆ.5 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹೆಚ್ಚುವರಿ ಕಟ್ಟಡ ಕಾಮಗಾರಿಗೆ ₹198.27 ಕೋಟಿ ಪರಿಷ್ಕೃತ ಅಂದಾಜು ಮೊತ್ತಕ್ಕೆ ಒಪ್ಪಿಗೆ ದೊರೆತಿತ್ತು.
ದಶಕಗಳಿಂದ ನಡೆದಿತ್ತು ಪ್ರಯತ್ನ
ಕ್ಯಾನ್ಸರ್ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಗಳ ಪೈಕಿ ಒಂದೆನಿಸಿರುವ ಉತ್ತರ ಕನ್ನಡದಲ್ಲಿ ಚಿಕಿತ್ಸೆಗೆ ಆಸ್ಪತ್ರೆ ಆರಂಭಿಸಲು ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆ ಪ್ರಯತ್ನ ನಡೆಸಿತ್ತು. 2012–13ರಲ್ಲಿಯೇ ಕ್ಯಾನ್ಸರ್ ಚಿಕಿತ್ಸೆ ಆಸ್ಪತ್ರೆ ಸ್ಥಾಪನೆಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಕಾರವಾರ ತಾಲ್ಲೂಕಿನ ಶಿರವಾಡದಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಯತ್ನ ನಡೆಯಿತು. ಆದರೆ ಜಾಗ ದೊರೆಯದ ಕಾರಣ ಯೋಜನೆ ನನೆಗುದಿಗೆ ಬಿದ್ದಿತ್ತು.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ 300 ರಿಂದ 400 ಕ್ಯಾನ್ಸರ್ ಪ್ರಕರಣ ವರದಿಯಾಗುತ್ತಿದೆ. ಆದರೆ ಕ್ಯಾನ್ಸರ್ ಚಿಕಿತ್ಸೆಗೆ ಮೀಸಲಿರುವ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ 4 ಸಾವಿರದಷ್ಟು ಕ್ಯಾನ್ಸರ್ ಪ್ರಕರಣ ವರದಿಯಾಗುತ್ತಿದೆ ಎಂಬುದಾಗಿ ತಜ್ಞರೊಬ್ಬರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.