ಶಿರಸಿ: ನಗರಸಭೆಯ ನಡೆಸುತ್ತಿರುವ ಮಳಿಗೆಯೊಂದರ ಮಾಸಿಕ ಖರ್ಚು ಸುಮಾರು ₹ 18ಸಾವಿರ, ಆದರೆ ಇದರಿಂದ ಬರುವ ಆದಾಯ ಹೆಚ್ಚೆಂದರೆ ₹ 4000 !
ಇಲ್ಲಿನ ನಗರಸಭೆಯ ಆವರಣದಲ್ಲಿ ₹ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಯಿದೆ. ನಗರದ ಹಸಿ ತ್ಯಾಜ್ಯಗಳಿಂದ ಉತ್ಪಾದಿಸುವ ಎರೆಹುಳು ಗೊಬ್ಬರವನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ಇದು ಗೊಬ್ಬರ ಮಾರಾಟ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿದಿನ ಇಲ್ಲಿ ₹ 100ರಿಂದ ₹ 120ರವರೆಗೆ ಗೊಬ್ಬರ ಮಾರಾಟದಿಂದ ಆದಾಯ ಸಿಗುತ್ತದೆ. ವಹಿವಾಟು ನೋಡಿಕೊಳ್ಳಲು ಒಬ್ಬರು ಸಿಬ್ಬಂದಿ ಇದ್ದಾರೆ. ಈ ಸಿಬ್ಬಂದಿಯ ವೇತನ ಹಾಗೂ ಕಟ್ಟಡದ ನಿರ್ವಹಣೆ ಸೇರಿ ತಿಂಗಳಿಗೆ ಸುಮಾರು ₹ 18ಸಾವಿರ ಖರ್ಚು ಬರುತ್ತದೆ.
‘ನಗರದ ಕೇಂದ್ರ ಸ್ಥಾನದಲ್ಲಿರುವ ಈ ಮಳಿಗೆಯನ್ನು ಬಾಡಿಗೆಗೆ ನೀಡಿದರೆ ನಗರಸಭೆಗೆ ಹೆಚ್ಚು ಆದಾಯ ಬರುತ್ತಿತ್ತು. ನಗರಸಭೆ ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಿದೆ. ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಂಡು ಮಳಿಗೆ ನಡೆಸುವ ಅನಿವಾರ್ಯತೆ ಇದೆಯೇ’ ಎಂದು ಪ್ರಶ್ನಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ.
ಈ ಮಳಿಗೆಯ ಬಗ್ಗೆ ವಿಭಾಗ ಮುಖ್ಯಸ್ಥರಿಂದ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸಲಾಗುವುದು ಎಂದು ನೂತನ ಪೌರಾಯುಕ್ತ ರಮೇಶ ನಾಯಕ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.