ADVERTISEMENT

ಕವಿ ದೇವರ ನಂತರದ ಸೃಷ್ಟಿಕರ್ತ: ರೋಹಿತ್‌

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 13:30 IST
Last Updated 11 ಡಿಸೆಂಬರ್ 2023, 13:30 IST
ಯಲ್ಲಾಪುರದಲ್ಲಿ ನಡೆದ ಸಾಹಿತ್ಯ ಮತ್ತು ಗಮಕ ಅಧಿವೇಶನದಲ್ಲಿ ರೋಹಿತ್‌ ಚಕ್ರತೀರ್ಥ ಮಾತನಾಡಿದರು. ರವಿ ಹೆಗಡೆ, ಹರಿಪ್ರಕಾಶ ಕೋಣೆಮನೆ, ರಘುನಂದನ ಭಟ್ಟ, ಡಿ. ಶಂಕರ ಭಟ್ಟ ಭಾಗವಹಿಸಿದ್ದರು
ಯಲ್ಲಾಪುರದಲ್ಲಿ ನಡೆದ ಸಾಹಿತ್ಯ ಮತ್ತು ಗಮಕ ಅಧಿವೇಶನದಲ್ಲಿ ರೋಹಿತ್‌ ಚಕ್ರತೀರ್ಥ ಮಾತನಾಡಿದರು. ರವಿ ಹೆಗಡೆ, ಹರಿಪ್ರಕಾಶ ಕೋಣೆಮನೆ, ರಘುನಂದನ ಭಟ್ಟ, ಡಿ. ಶಂಕರ ಭಟ್ಟ ಭಾಗವಹಿಸಿದ್ದರು   

ಯಲ್ಲಾಪುರ: ಕವಿ ದೇವರ ನಂತರದ ಸೃಷ್ಟಿಕರ್ತ. ಆತ ಜಗತ್ತನ್ನೇ ಕಾವ್ಯಮಯವಾಗಿ ಮಾಡಬಲ್ಲ ಎಂದು ಲೇಖಕ ರೋಹಿತ ಚಕ್ರತೀರ್ಥ ಹೇಳಿದರು.

ಪಟ್ಟಣದ ಅಡಿಕೆ ಭವನದಲ್ಲಿ ಕರ್ನಾಟಕ ಗಮಕಕಲಾ ಪರಿಷತ್‌ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಭಾನುವಾರ ನಡೆದ ಸಾಹಿತ್ಯ ಮತ್ತು ಗಮಕ ಅಧಿವೇಶನದ ಸಮಾರೋಪದಲ್ಲಿ ಅವರು ಮಾತನಾಡಿದರು.

ಸಾಹಿತ್ಯ ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತದೆ. ಕಾವ್ಯ ಗಂಭೀರವಾಗಿಯೇ ಇರಬೇಕಿಲ್ಲ. ಅದು ಎಲ್ಲವನ್ನೂ ಬಿಚ್ಚಿಡಬೇಕಿಲ್ಲ. ಅರ್ಧಮುಚ್ಚಿದಂತೆ, ಅರ್ಧ ತೆರೆದಂತೆ ಇದ್ದಾಗ ಅದು ಹೆಚ್ಚು ಚರ್ಚಿತವಾಗುತ್ತದೆ. ಗೇಯತೆಯನ್ನು ಒಳಗೊಂಡ, ಹಾಡಬಹುದಾದ ಕವಿತೆಗಳೇ ಹೆಚ್ಚುಕಾಲ ಉಳಿಯುತ್ತವೆ ಎಂಬುದು ಮತ್ತೆ ಮತ್ತೆ ಸಾಧಿತವಾಗುತ್ತಿದೆ ಎಂದರು.

ADVERTISEMENT

ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಸಾಹಿತ್ಯದಲ್ಲಿ ರಾಷ್ಟ್ರೀಯತೆ ಅಂದರೆ ನಾವೆಲ್ಲ ಒಂದು ಎಂಬ ಭಾವನೆ ಮೂಡಿಸುವುದಾಗಿದೆ. ತಾವು ಅದೃಶ್ಯರಾಗಿದ್ದುಕೊಂಡೇ ಸಮಾಜಕ್ಕೆ ಮಹೋನ್ನತವಾದ, ಉದಾತ್ತವಾದ ವಿಚಾರವನ್ನು ಅನೇಕ ಮಹನೀಯರು ನೀಡಿದ್ದಾರೆ. ಅಂತವರನ್ನು ಪರಿಚಯಿಸುವ ಕೆಲಸವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಮಾಡುತ್ತಿದೆ ಎಂದರು.

ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ, ಸರ್ವೋದಯ ಶಿಕ್ಷಣ ಸಮಿತಿ ಅಧ್ಯಕ್ಷ ಡಿ. ಶಂಕರ ಭಟ್ಟ ಇದ್ದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಶಂಕರ ಭಟ್ಟ ಸ್ವಾಗತಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಗಣಪತಿ ಗಾಂವ್ಕರ ವಂದಿಸಿದರು. ನಾಗೇಶ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.