ADVERTISEMENT

‘ನಾರಿ ಸ್ವಾವಲಂಬನೆ ಮಹಾತ್ಮನ ಕನಸು’

ಗಾಂಧಿ ಕುರಿತ ವಿಚಾರ ಸಂಕಿರಣದಲ್ಲಿ ತಹಶಿಲ್ದಾರ್ ಶ್ರೀಧರ ಮುಂದಲಮನಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 12:17 IST
Last Updated 3 ಅಕ್ಟೋಬರ್ 2022, 12:17 IST
‘ದೇಶಕ್ಕಾಗಿ ನಾವು’ ತಂಡ ಮತ್ತು ‘ಅನುಬಂಧ ಚಾರಿಟೇಬಲ್ ಟ್ರಸ್ಟ್’ ಜಂಟಿಯಾಗಿ ಆಯೋಜಿಸಿದ್ದ ಸತ್ಯಾಗ್ರಹಿ ಎಂಬ ಗಾಂಧಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶ್ರೀಧರ ಮುಂದಲಮನಿ ಮಾತನಾಡಿದರು.
‘ದೇಶಕ್ಕಾಗಿ ನಾವು’ ತಂಡ ಮತ್ತು ‘ಅನುಬಂಧ ಚಾರಿಟೇಬಲ್ ಟ್ರಸ್ಟ್’ ಜಂಟಿಯಾಗಿ ಆಯೋಜಿಸಿದ್ದ ಸತ್ಯಾಗ್ರಹಿ ಎಂಬ ಗಾಂಧಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶ್ರೀಧರ ಮುಂದಲಮನಿ ಮಾತನಾಡಿದರು.   

ಶಿರಸಿ: ‘ಮಹಿಳೆಯರು ಸ್ವಾವಲಂಬಿಗಳಾದರೆ ದೇಶ ಸದೃಢವಾಗಬಲ್ಲದು ಎಂದು ನಂಬಿದ್ದ ಮಹಾತ್ಮ ಗಾಂಧೀಜಿ ಈ ದಿಶೆಯಲ್ಲಿ ನಿರಂತರ ಹೋರಾಟ ನಡೆಸಿದ್ದರು. ಅವರ ಕನಸು ನನಸು ಮಾಡುವುದು ಈ ಪೀಳಿಗೆಯ ಗುರಿಯಾಗಬೇಕು’ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ಹೇಳಿದರು.

‘ದೇಶಕ್ಕಾಗಿ ನಾವು’ ತಂಡ ಮತ್ತು ‘ಅನುಬಂಧ ಚಾರಿಟೇಬಲ್ ಟ್ರಸ್ಟ್’ ಜಂಟಿಯಾಗಿ ಇಲ್ಲಿನ ಭಾರತ ಸೇವಾದಳ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸತ್ಯಾಗ್ರಹಿ ಎಂಬ ಗಾಂಧಿ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆಗೆ ಎಲ್ಲ ಕ್ಷೇತ್ರದಲ್ಲೂ ಸಮಾನತೆ ಪರಿಪೂರ್ಣವಾಗಿ ಸಿಗಬೇಕು. ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದು, ಸಮಾಜವೂ ಶಕ್ತಿ ನೀಡಬೇಕು’ ಎಂದರು.

ADVERTISEMENT

ಟ್ರಸ್ಟ್ ಗೌರವ ಅಧ್ಯಕ್ಷ ಕೆ.ಎನ್.ಹೊಸ್ಮನಿ, ‘ಗಾಂಧೀಜಿ ಅವರ ವಿಚಾರಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಅವರು ವಿಶ್ವವೇ ಒಪ್ಪುವ ನಾಯಕರಾಗಿದ್ದರು’ ಎಂದರು.

ಉಪನ್ಯಾಸ ನೀಡಿದ ವಕೀಲೆ ಸರಸ್ವತಿ ಹೆಗಡೆ, ‘ಸಂಕುಚಿತ ಮನೋಭಾವ, ಕೀಳರಿಮೆಯಿಂದ ಹೊರಬರಲು ಮಹಿಳೆಯರು ಗಾಂಧಿ ತತ್ವಗಳನ್ನು ಅಧ್ಯಯನ ಮಾಡಬೇಕು. ಆತ್ಮವಿಶ್ವಾಸ, ಜ್ಞಾನ ನಮ್ಮನ್ನು ಸಮಾಜದಲ್ಲಿ ಮುನ್ನಡೆಸುವ ಸಾಧನಗಳು’ ಎಂದರು.

ಅನುಬಂಧ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಗೌಡ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಸರಾ ಪ್ರಯುಕ್ತ ಟ್ರಸ್ಟ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಬಾಗಿನ ಸಮರ್ಪಣೆ ಮಾಡಲಾಯಿತು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್, ಸಾಮಾಜಿಕ ಕಾರ್ಯಕರ್ತರಾದ ಜಗದೀಶ ಗೌಡ, ಶ್ರೀಪಾದ ಹೆಗಡೆ ಕಡವೆ, ಅಶೋಕ ಭಜಂತ್ರಿ, ಶೋಭಾ ಗೌಡ, ಮೋಹಿನಿ ಬೈಲೂರ, ವಿಜಯಾ ದೇಶಪಾಂಡೆ ಇದ್ದರು.

ಟ್ರಸ್ಟ್ ಉಪಾಧ್ಯಕ್ಷ ಅರವಿಂದ ತೆಲಗುಂದ ಸ್ವಾಗತಿಸಿದರು. ಅಶ್ವಿನಿ ರವಿಕುಮಾರ್ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.