ADVERTISEMENT

ಮರು ಪರಿಶೀಲನೆಯ ವರದಿ ವಿಳಂಬವಾಗದಿರಲಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 16:13 IST
Last Updated 23 ನವೆಂಬರ್ 2022, 16:13 IST

ಕಾರವಾರ: ‘ಪರೇಶ ಮೇಸ್ತ ಸಾವು ಪ್ರಕರಣದಲ್ಲಿ ಸಿ.ಬಿ.ಐ ಸಲ್ಲಿಸಿರುವ ಬಿ ರಿಪೋರ್ಟ್‌ಗೆ ಆತನ ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಸಲ್ಲಿಸುವ ಮರು ಪರಿಶೀಲನೆ ಅರ್ಜಿಯ ವಿಚಾರಣೆ ನಡೆಸಿ ಬೇಗ ಫಲಿತಾಂಶ ಕೊಡಬೇಕು. ಮತ್ತೆ ತೊಂದರೆಯಾಗಬಾರದು’ ಎಂದು ಮಾಜಿ ಶಾಸಕ ಸತೀಶ ಸೈಲ್ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರವಿದೆ. ಸಾವಿನ ಪ್ರಕರಣದ ತನಿಖೆಯ ವರದಿ ಬರಲು ವಿಳಂಬವಾದಂತೆ ಇದನ್ನೂ ಮಾಡಬಾರದು’ ಎಂದರು.

‘ಕಾರವಾರ– ಅಂಕೋಲಾ ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಮಂಜೂರಾದ ಹಲವು ಸೇತುವೆಗಳ ಕಾಮಗಾರಿ ಪೂರ್ಣಗೊಳಿಸಲು ಇನ್ನೂ ಸಾಧ್ಯವಾಗಿಲ್ಲ. ಮಂಜಗುಣಿ, ಖಾರ್ಗೆ, ಉಳಗಾ ಸೇತುವೆಗಳು ಹಾಗೂ ಸಂಪರ್ಕ ರಸ್ತೆಗಳು ಅಪೂರ್ಣವಾಗಿವೆ. ಈ ಬಗ್ಗೆ ಪ್ರಶ್ನಿಸಿದರೆ, ಬಿಜೆಪಿಯವರು ಕಾಮಗಾರಿಗೆ ಹಿಂದಿನ ಸರ್ಕಾರದ ಹಣವೇ ಕೊಡಲಿಲ್ಲ ಎಂದು ಹೇಳುತ್ತಾರೆ. ಆದರೆ, ಅದರ ಮೊತ್ತವೂ ಟೆಂಡರ್ ಆಗುವಾಗಲೇ ನಿರ್ಧಾರವಾಗುತ್ತದೆ. ಹಾಗಾಗಿ ಮಾಹಿತಿಯಿಲ್ಲದವರ ರೀತಿ ಮಾತನಾಡಬಾರದು’ ಎಂದು ಟೀಕಿಸಿದರು.

ADVERTISEMENT

ಕುಮಟಾದಲ್ಲಿ ನ.24ರಂದು ನಡೆಯುವ ಜನಜಾಗೃತಿ ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಪ್ರಮುಖರಾದ ಸತೀಶ ಜಾರಕಿಹೊಳಿ, ವೀರಪ್ಪ ಮೊಯ್ಲಿ ಮುಂತಾದವರು ಭಾಗವಹಿಸಲಿದ್ದಾರೆ’ ಎಂದರು.

ಪ್ರಮುಖರಾದ ಅಶೋಕ ನಾಯ್ಕ, ಸಲೀಂ ಶೇಖ್, ಜಿ.ಟಿ ನಾಯ್ಕ, ಸಂದೀಪ ಕಲಗುಟಕರ್, ಪ್ರಮೋದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.