ಶಿರಸಿ: ಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿರುವ ಫೋಟೊಗ್ರಾಫರ್ಗಳು ಹಾಗೂ ವಿಡಿಯೋ ಗ್ರಾಫರ್ಗಳನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಸೇರಿಸಬೇಕು ಎಂದು ಪೋಟೋಗ್ರಾಪರ್ಸ್ ಮತ್ತು ವಿಡಿಯೋಗ್ರಾಪರ್ಸ್ ಅಸೋಸಿಯೇಶನ್ ಶಿರಸಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಕಾನಸೂರ ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಎರಡು ವರ್ಷಗಳಿಂದ ಕಾಡಿರುವ ಕೋವಿಡ್ ಬಾಧೆಯಿಂದ ಫೋಟೊಗ್ರಫಿ ಕ್ಷೇತ್ರ ನಲುಗಿದೆ. ಆದಾಯವಿಲ್ಲದ ಪರಿಣಾಮ ಇದೇ ವೃತ್ತಿ ನಂಬಿಕೊಂಡಿರುವ ನೂರಾರು ಕುಟುಂಬಗಳು ಸಂಕಷ್ಟಕ್ಕಿ ಸಿಲುಕಿವೆ’ ಎಂದರು.
‘ಫೋಟೊಗ್ರಾಫರಗಳಿಗೆ ಸರ್ಕಾರದ ಯಾವ ಸೌಲಭ್ಯವೂ ದೊರೆಯುತ್ತಿಲ್ಲ. ಸಣ್ಣ ಆದಾಯ ನಂಬಿ ಬದುಕುವವರಿಗೆ ಆರೋಗ್ಯ, ಶಿಕ್ಷಣವೂ ಸೇರಿದಂತೆ ಇತರ ಕಾರ್ಮಿಕ ವರ್ಗಕ್ಕೆ ಒದಗಿಸುವ ಸವಲತ್ತು ಒದಗಿಸಿಕೊಡಬೇಕು’ ಎಂದು ಒತ್ತಾಯಿಸಿದರು.
‘ಸಂಘದ ಎಲ್ಲಾ ಸದಸ್ಯರಿಗೂ ಗುರುತಿನ ಚೀಟಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಿರ್ದಿಷ್ಟ ದರ ನಿಗದಿಪಡಿಸಲು ತೀರ್ಮಾನಿಸಲಾಗಿದೆ. ಏಕರೂಪದ ದರಪಟ್ಟಿ ಪ್ರಕಟಿಸಲಾಗುವುದು’ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸಂತೋಷ ಸಿರ್ಸಿಕರ್, ಪ್ರಮುಖರಾದ ಲಕ್ಷ್ಮೀನಾರಾಯಣ ಭಟ್ಟ, ಜಗದೀಶ ಜೈವಂತ, ನವೀನ್ ಗಾಂವ್ಕರ್, ರವಿ ಹಿರೇಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.