ADVERTISEMENT

ಉತ್ತರ ಕನ್ನಡದಲ್ಲಿ 350ರ ಗಡಿ ದಾಟಿದ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ

ಭಾನುವಾರ 21 ಜನರಿಗೆ ಕೋವಿಡ್ ದೃಢ: ಒಂಬತ್ತು ಮಂದಿಯ ಮೂಲದ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 12:39 IST
Last Updated 5 ಜುಲೈ 2020, 12:39 IST
ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆ
ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆ    

ಕಾರವಾರ: ಜಿಲ್ಲೆಯಲ್ಲಿ ಭಾನುವಾರ 21 ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಅವರಲ್ಲಿ ಒಂಬತ್ತು ಮಂದಿಯ ಸೋಂಕಿನ ಮೂಲವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಹೊಸದಾಗಿ ದೃಢಪಟ್ಟಿರುವ ಪ್ರಕರಣಗಳ ಪೈಕಿ ಭಟ್ಕಳದಲ್ಲಿ ಒಂಬತ್ತು ಮಂದಿಗೆ, ಕುಮಟಾ, ಮುಂಡಗೋಡ ಮತ್ತು ಹಳಿಯಾಳದಲ್ಲಿ ತಲಾಮೂವರಿಗೆ, ಕಾರವಾರದಲ್ಲಿ ಇಬ್ಬರಿಗೆ ಹಾಗೂ ಯಲ್ಲಾಪುರದಲ್ಲಿ ಒಬ್ಬರಿಗೆ ಕೋವಿಡ್ ಖಚಿತವಾಗಿದೆ.

ತಾಲ್ಲೂಕುವಾರು:ಭಟ್ಕಳ ತಾಲ್ಲೂಕಿನ ಒಂಬತ್ತು ಮಂದಿ ಸೋಂಕಿತರ ಪೈಕಿ ಎಂಟು ಮಂದಿಯೂ ಈ ಮೊದಲೇ ಸೋಂಕಿತರಾದವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು.78 ವರ್ಷದ ವೃದ್ಧೆಯೊಬ್ಬರಿಗೆ 17017 ಸಂಖ್ಯೆರೋಗಿಯಿಂದ ಕೋವಿಡ್ ಹಬ್ಬಿದೆ. ಉಳಿದ ಏಳು ಮಂದಿಯೂ ಮತ್ತೊಬ್ಬ ಸೋಂಕಿತರ (ರೋಗಿ ಸಂಖ್ಯೆ 17121) ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ.

ADVERTISEMENT

ಅವರಲ್ಲಿ 19 ಮತ್ತು 22 ವರ್ಷದ ಯುವತಿಯರು, 13 ವರ್ಷದ ಬಾಲಕ, 25, 27, 21 ವರ್ಷದ ಯುವಕರು ಹಾಗೂ 52 ವರ್ಷದ ವ್ಯಕ್ತಿ ಸೇರಿದ್ದಾರೆ.

ಮುಂಡಗೋಡ ತಾಲ್ಲೂಕಿನ ಮೂವರು ಸೋಂಕಿತರ ಪೈಕಿ 21 ವರ್ಷದ ಯುವಕ ಬೆಂಗಳೂರಿನಿಂದ ವಾಪಸಾಗಿದ್ದರು. ಉಳಿದ ಇಬ್ಬರ (22 ವರ್ಷದ ಯುವತಿ ಹಾಗೂ 44 ವರ್ಷದ ಮಹಿಳೆ) ಸೋಂಕಿನ ಮೂಲ ತಿಳಿದುಬರಬೇಕಿದೆ. ಹಳಿಯಾಳ ತಾಲ್ಲೂಕಿನಲ್ಲಿ 50 ವರ್ಷದ ವ್ಯಕ್ತಿ ಸೋಂಕಿತರ (ರೋಗಿ ಸಂಖ್ಯೆ 14572) ಸಂಪರ್ಕಕ್ಕೆ ಬಂದಿದ್ದರು.

ಕುಮಟಾ ತಾಲ್ಲೂಕಿನ 26, 29 ವರ್ಷದ ಯುವತಿಯರು ಹಾಗೂ 37 ವರ್ಷದ ಪುರುಷ, ಕಾರವಾರದ ತಾಲ್ಲೂಕಿನ 49 ವರ್ಷದ ಮಹಿಳೆ ಮತ್ತು 62 ವರ್ಷದ ವ್ಯಕ್ತಿ ಹಾಗೂ ಯಲ್ಲಾಪುರದ 35 ವರ್ಷದ ವ್ಯಕ್ತಿಗೆ ಕೋವಿಡ್ ದೃಢಪಟ್ಟಿದೆ. ಆದರೆ, ಅವರಸೋಂಕಿನ ಮೂಲ ತಿಳಿದುಬರಬೇಕಿದೆ.

ಆರು ಮಂದಿ ಗುಣಮುಖ:ಕೋವಿಡ್‌ನಿಂದ ಗುಣಮುಖರಾದ ಆರು ಮಂದಿಯನ್ನು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿಶೇಷ ವಾರ್ಡ್‌ನಿಂದ ಭಾನುವಾರ ಬಿಡುಗಡೆ ಮಾಡಲಾಯಿತು. ಈ ಪೈಕಿ ಹೊನ್ನಾವರದ 37 ವರ್ಷದ‍ಪುರುಷ ಮತ್ತು 32 ವರ್ಷದ ಮಹಿಳೆ, ಭಟ್ಕಳದ 24 ವರ್ಷದ ಯುವಕ, ಮುಂಡಗೋಡದ 30 ವರ್ಷದ ಮಹಿಳೆ, ಹಳಿಯಾಳದ ಐದು ವರ್ಷದ ಬಾಲಕ, ದಾವಣಗೆರೆಯ 26 ವರ್ಷದ ಯುವಕ ಸೇರಿದ್ದಾರೆ.

ಕಡ್ಡಾಯ ತಪಾಸಣೆಗೆ ಆದೇಶ:ಬೆಂಗಳೂರು ಸೇರಿದಂತೆ ಇತರಜಿಲ್ಲೆಗಳಿಂದ ಉತ್ತರಕನ್ನಡಕ್ಕೆ ಮೂರು ಅಥವಾ ಹೆಚ್ಚು ದಿನಗಳ ವಾಸ್ತವ್ಯಕ್ಕೆ ಬರುವವರು ಕಡ್ಡಾಯವಾಗಿ ಜ್ವರ ತಪಾಸಣೆ ಮಾಡಿಸಿಕೊಳ್ಳಬೇಕು. ಜಿಲ್ಲೆಗೆ ಬಂದ ದಿನವೇ ಫೀವರ್ ಕ್ಲಿನಿಕ್‌ಗೆ ಭೇಟಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದ್ದಾರೆ.

ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದೆ. ಈ ಆದೇಶವನ್ನು ಉಲ್ಲಂಘಿಸಿದವರನ್ನು 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಅಲ್ಲದೇ ಅವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 20‌05 ಹಾಗೂ ಸಾಂಕ್ರಾಮಿಕ ರೋಗ ನಿಯಂತ್ರಣ ಸುಗ್ರೀವಾಜ್ಞೆ 2020ರ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ: ಅಂಕಿ ಅಂಶ

354 : ಒಟ್ಟು ಸೋಂಕಿತರು

159 :ಗುಣಮುಖರಾದವರು‌

194:ಸಕ್ರಿಯ ಪ್ರಕರಣಗಳು

1:ಮೃತಪಟ್ಟವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.