ಯಲ್ಲಾಪುರ:ಪಟ್ಟಣದ ಸರ್ಕಾರಿ ತಾಲ್ಲೂಕು ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿಯು ಎರಡುವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದೆ. ಈಗಾಗಲೇಕಟ್ಟಲಾಗಿರುವ ಗೋಡೆಗಳು, ಚಾವಣಿ ಬಿರುಕು ಬಿಟ್ಟಿವೆ.
ಈ ಆಸ್ಪತ್ರೆಯನ್ನು 30ರಿಂದ 100 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದರ ಕಾಮಗಾರಿಗೆ ₹7 ಕೋಟಿ ಅನುದಾನ ನಿಗದಿಯಾಗಿದ್ದು, ಆಂಧ್ರಪ್ರದೇಶದ ಗುತ್ತಿಗೆದಾರರು ಗುತ್ತಿಗೆ ಪಡೆದಿದ್ದಾರೆ. ಶೇ 60ರಷ್ಟು ಕಾಮಗಾರಿ ಈವರೆಗೆ ಮುಗಿದಿದ್ದು, ಪೂರ್ಣಗೊಳ್ಳಲು ಇನ್ನೂ ಎಷ್ಟು ದಿನ ಬೇಕಾಗುತ್ತದೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ಆಸ್ಪತ್ರೆಯ ನೂತನ ಕಟ್ಟಡದ ತುಂಬಬಿರುಕು ಕಾಣಿಸಿಕೊಂಡಿದೆ.ಇಂತಹ ಕಟ್ಟಡದಲ್ಲಿರೋಗಿಗಳು, ವೈದ್ಯರು ಮತ್ತು ಸಿಬ್ಬಂದಿ ತಂಗಬಹುದೇ ಎಂಬ ಸಂದೇಹ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೆ ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದು, ಅನೇಕರ ಪ್ರಾಣ ತೆಗೆದಿದೆ. ಅಂತಹ ಮತ್ತೊಂದು ದುರಂತ ಸಂಭವಿಸುವ ಮೊದಲು ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣದ ನಿವಾಸಿ ನಾಗರಾಜ ಆಗ್ರಹಿಸಿದ್ದಾರೆ.
ಬಿರುಕುಬಿಟ್ಟ ಜಾಗಕ್ಕೆ ತೇಪೆ, ಬಣ್ಣ ಹಚ್ಚಿ ಮುಚ್ಚುವ ಕಾರ್ಯವೂ ನಡೆಯುತ್ತಿದೆ. ಹಳೆಯ ಕಟ್ಟಡದ ಬಾಗಿಲು, ಕಿಟಕಿಗಳನ್ನು ಬದಲಿಸುವಂತೆ ಗುತ್ತಿಗೆದಾರನ ಷರತ್ತಿನಲ್ಲಿದೆ. ಆದರೂ ಹಳೆಯದಕ್ಕೇಬಣ್ಣ ಹಚ್ಚಿ ಹೊಸದರಂತೆಬಿಂಬಿಸುವಕಾರ್ಯ ನಡೆಯುತ್ತಿದೆ ಎಂಬ ಆರೋಪವೂ ಇದೆ.
ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಕಾರಣ ಅಪಘಾತಗಳ ಸಂಖ್ಯೆ ಅಧಿಕವಾಗಿದೆ. ಆಸ್ಪತ್ರೆ ಕಟ್ಟಡ ಸುಸಜ್ಜಿತವಾಗಿ ಇರಬೇಕು ಎಂದುಶಾಸಕ ಶಿವರಾಮ ಹೆಬ್ಬಾರ ಕೂಡ ಗುತ್ತಿಗೆದಾರರಿಗೆ ಹಾಗೂ ಎಂಜಿನಿಯರ್ಗಳಿಗೆ ನಿರ್ದೇಶನ ನೀಡಿದ್ದಾರೆ. ಆದರೂ ಕಳಪೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ನೋಟಿಸ್ ನೀಡಿ, ದುರಸ್ತಿ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ನೋಟಿಸ್ ನೀಡಲು ತೀರ್ಮಾನ:‘ಆಸ್ಪತ್ರೆಯ ಕಟ್ಟಡ ನಿರ್ಮಾಣ ಹಂತವನ್ನು ಗಮನಿಸುತ್ತಿದ್ದೇವೆ. ಗೋಡೆಗಳು ಬಿರುಕು ಬಿಟ್ಟಿರುವುದನ್ನು ಎಂಜಿನಿಯರ್ಗಳಿಗೆತಿಳಿಸಲಾಗಿದೆ. ಆದರೆ, ಯಾರೂ ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ನಮ್ಮ ಸಲಹೆ– ಸೂಚನೆಗಳನ್ನು ಸ್ವೀಕರಿಸುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ, ಗುತ್ತಿಗೆದಾರನಿಗೆ ನೋಟಿಸ್ ನೀಡಲು ತೀರ್ಮಾನಿಸಿದ್ದೇನೆ’ ಎಂದು ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಮಾ ಹೆಗಡೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.