ADVERTISEMENT

ಶಿರಸಿ | ಬೆಳೆ ಹಾನಿ: ಪರಿಹಾರಕ್ಕಾಗಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 4:22 IST
Last Updated 18 ಅಕ್ಟೋಬರ್ 2025, 4:22 IST
ರಾಘವೇಂದ್ರ ನಾಯ್ಕ 
ರಾಘವೇಂದ್ರ ನಾಯ್ಕ    

ಶಿರಸಿ: ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿಯ ಕಾರಣಕ್ಕೆ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ನಾಶವಾಗಿದ್ದು, ರಾಜ್ಯ ಸರ್ಕಾರವು ಪ್ರತಿ ಎಕರೆಗೆ ₹30 ಸಾವಿರ ಪರಿಹಾರ ನೀಡುವ ಜತೆಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅತಿಯಾದ ಮಳೆಯ ಕಾರಣಕ್ಕೆ ಅಡಿಕೆಗೆ ಕೊಳೆ ರೋಗ, ಭತ್ತಕ್ಕೆ ಬೆಂಕಿ ರೋಗ, ಕಂದುಹುಳು ಬಾಧೆ ಸೇರಿ ವಿವಿಧ ರೋಗಗಳು ಬಂದಿವೆ. ನಿರೀಕ್ಷೆಯಷ್ಟು ಮೆಕ್ಕೆಜೋಳ ನಾಟಿ ಮಾಡಲಾಗಿಲ್ಲ. ಕಾಳುಮೆಣಸಿಗೆ ಸೊರಗುರೋಗ ಬಂದಿದೆ. ಕೋಕೋ ಬೆಳೆಗೂ ಕೊಳೆ ಕಾಣಿಸಿಕೊಂಡಿದ್ದು, ಬಹುತೇಕ ಎಲ್ಲ ಬೆಳೆಗಳೂ ನಾಶವಾಗಿವೆ’ ಎಂದು ತಿಳಿಸಿದರು.

‘2023– 24ನೇ ಸಾಲಿನ ಹವಾಮಾನಾಧಾರಿತ ಬೆಳೆ ವಿಮೆ ಬರಬೇಕಿದೆ. ಕಳೆದ ಬಾರಿ ಸಾಕಷ್ಟು ಗೊಂದಲ ಉಂಟಾಗಿತ್ತು. ಈ ಬಾರಿ ತಕ್ಷಣ ಈ ಕುರಿತು ಸರ್ಕಾರ ಕಾರ್ಯತತ್ಪರವಾಗಬೇಕಿದೆ’ ಎಂದ ಅವರು, ‘2021– 22ರಿಂದ ಆಯ್ಕೆಯಾದ ಗಂಗಾ ಕಲ್ಯಾಣ ಕೊಳವೆ ಬಾವಿ ಈವರೆಗೆ ಹಲವು ಫಲಾನುಭವಿಗಳಿಗೆ ತಲುಪಿಲ್ಲ. ಸಂಬಂಧಪಟ್ಟ ನಿಗಮದಿಂದ ಹಣ ಜಮಾ ಆಗಬೇಕು. ಇಲ್ಲದಿದ್ದರೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

‘ಶಿರಸಿ– ಹಾವೇರಿ ರಸ್ತೆ ದುರಸ್ತಿ ಕಾರ್ಯ ಸಂಪೂರ್ಣವಾಗಿಲ್ಲ. ಅಧಿಕಾರಿಗಳ ನಿರಾಸಕ್ತಿ ಎದ್ದು ಕಾಣುತ್ತಿದೆ. ತಕ್ಷಣ ದುರಸ್ತಿ ಕಾರ್ಯವಾಗದಿದ್ದರೆ ಹಾನಗಲ್ ಹಾಗೂ ಶಿರಸಿ ತಾಲ್ಲೂಕಿನ ರೈತ ಸಂಘದ ವತಿಯಿಂದ ಹೋರಾಟ ನಡೆಸಲಾಗುವುದು. ದೊಡ್ನಳ್ಳಿ– ಬಂಕನಾಳ ರಸ್ತೆ ಅಭಿವೃದ್ಧಿ ಮಾಡಬೇಕು. ಅದರ ವಿಸ್ತರಣೆ ತಕ್ಷಣ ಕ್ರಮವಹಿಸಬೇಕು’ ಎಂದರು.

ಸಂಘಟನೆಯ ನವೀನ ಜಡೇದರ, ಮಂಜುನಾಥ ಮುಡೆಕೊಪ್ಪ, ನಾಗರಾಜ ಡಾಂಗೆ ಇದ್ದರು.

ರೈತ ಸಂಪರ್ಕ ಕೇಂದ್ರದಿಂದ ಕಳಪೆ ಬೀಜ ವಿತರಣೆ ಆಗುತ್ತಿದೆ. ಈ ಬಾರಿ ಮೂರು ಜಾತಿಯ ಭತ್ತದ ಬೀಜ ಕಳಪೆ ಬಂದಿದೆ. ಕಳಪೆ ಬೀಜ ಪಡೆದು ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು
ರಾಘವೇಂದ್ರ ನಾಯ್ಕ ಕಿರವತ್ತಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.