ಮುಂಡಗೋಡ: ತಾಲ್ಲೂಕಿನಲ್ಲಿ ಅತಿಯಾದ ಮಳೆಯಿಂದ ಗೋವಿನಜೋಳ, ಶುಂಠಿ ಬೆಳೆ ಸಂಪೂರ್ಣ ಹಾನಿಯಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಪರಿಹಾರ ವಿತರಿಸಬೇಕು. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದರೂ, ಅಧಿಕಾರಿಗಳು ನೂರಾರು ಎಕರೆ ಎಂದು ತಪ್ಪು ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ನಾಯಕ ಆರೋಪಿಸಿದರು.
ತಾಲ್ಲೂಕಿನ ಇಂದೂರ, ಕೊಪ್ಪ ಗ್ರಾಮಗಳ ಬೆಳೆ ಹಾನಿಯಾದ ಗದ್ದೆಗಳಿಗೆ ಗುರುವಾರ ಭೇಟಿ ನೀಡಿದ ಬಿಜೆಪಿ ಮುಖಂಡರ ತಂಡವು, ಸ್ಥಳೀಯ ರೈತರಿಂದ ಮಾಹಿತಿ ಪಡೆದುಕೊಂಡ ನಂತರ ಮಾತನಾಡಿದರು.
ಶೇ 80ರಷ್ಟು ಅಡಿಕೆ ಬೆಳೆಯೂ ಅತಿಯಾದ ಮಳೆಯಿಂದ ಹಾನಿಯಾಗಿದೆ. ಆದರೆ, ಇಲ್ಲಿನ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಒಂದೇ ಒಂದು ಎಕರೆ ಅಡಿಕೆ ಹಾನಿಯಾಗಿಲ್ಲ ಎಂಬಂತೆ ಜಿಲ್ಲಾಧಿಕಾರಿಗೆ ವರದಿ ಕಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಮೀನುಗಾರಿಕೆ ಇಲಾಖೆಗೆ ಮಾತ್ರ ಸೀಮಿತಗೊಂಡಂತೆ ವರ್ತಿಸುತ್ತಿದ್ದು, ರೈತರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಸರ್ಕಾರ ಕೂಡಲೇ ಬೆಳೆಹಾನಿಯಾದ ರೈತರಿಗೆ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಲ್.ಟಿ.ಪಾಟೀಲ ಮಾತನಾಡಿ, ತಾಲ್ಲೂಕಿನಲ್ಲಿ ಶೇ99ರಷ್ಟು ಗೋವಿನಜೋಳ ಬೆಳೆ ಹಾನಿಯಾಗಿರುವುದು ಗದ್ದೆಗಳಿಗೆ ಭೇಟಿ ನೀಡಿದಾಗ ಕಂಡುಬಂದಿದೆ. ರೈತರ ಗದ್ದೆಗಳಿಗೆ ಅಧಿಕಾರಿಗಳು ಸ್ವತಃ ಭೇಟಿ ನೀಡಿ, ಹಾನಿಯ ಅಂದಾಜು ಪರಿಶೀಲಿಸಬೇಕು. ಯಾವುದೇ ಬೆಳೆ ತೆಗೆದುಕೊಂಡರೂ, ಶೇ60ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿರುವುದನ್ನು ಕಾಣಬಹುದಾಗಿದೆ. ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಸರ್ಕಾರ ಪರಿಹಾರ ನೀಡಬೇಕು. ಇಲ್ಲವಾದರೆ, ರೈತರ ಜೊತೆಗೂಡಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.
ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ, ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಪಾಟೀಲ, ರಾಮಚಂದ್ರ ಜೈನ್, ರೈತ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಬೆಣ್ಣಿ, ವಿಠ್ಠಲ ಬಾಳಂಬೀಡ, ಭರತರಾಜ ಹದಳಗಿ, ರಾಜೇಶ ಸೋಮಣಕರ, ದೇವೆಂದ್ರ ಕೆಂಚಗೊಣ್ಣನವರ, ಬಸಪ್ಪ ಗಲಭಿ, ಗಣೇಶ ಕೀರ್ತೆಪ್ಪನವರ, ಬಾಬಣ್ಣ ವೆರ್ಣೇಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.