ADVERTISEMENT

ಶಿರಸಿ | ಬೆಳೆ ನಷ್ಟ: ಪರಿಹಾರಕ್ಕೆ ಬೆಳೆಗಾರರ ಒತ್ತಾಯ

ಅಡಿಕೆ ತೋಟಗಳಲ್ಲಿ ಮಿತಿಮೀರಿದ ಮಂಗಗಳ ಹಾವಳಿ

ರಾಜೇಂದ್ರ ಹೆಗಡೆ
Published 15 ಡಿಸೆಂಬರ್ 2025, 2:26 IST
Last Updated 15 ಡಿಸೆಂಬರ್ 2025, 2:26 IST
ಶಿರಸಿಯ ಗ್ರಾಮೀಣ ಭಾಗದ ತೋಟದಲ್ಲಿ ಹಣ್ಣಡಿಕೆಯನ್ನು ಹಾಳುಮಾಡಿರುವ ಮಂಗಗಳು 
ಶಿರಸಿಯ ಗ್ರಾಮೀಣ ಭಾಗದ ತೋಟದಲ್ಲಿ ಹಣ್ಣಡಿಕೆಯನ್ನು ಹಾಳುಮಾಡಿರುವ ಮಂಗಗಳು    

ಶಿರಸಿ: ‘ಅಡಿಕೆ ಕೊಳೆ ರೋಗದಿಂದ ನಷ್ಟವಾಗುವ ಪ್ರಮಾಣಕ್ಕಿಂತ ಮಂಗಗಳ ದಾಳಿಯಿಂದ ಆಗುವ ನಷ್ಟವೇ ಹೆಚ್ಚು. ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಬೆಳೆ ನಷ್ಟವಾದರೂ ಪರಿಹಾರ ಮಾತ್ರ ಶೂನ್ಯ’ ಎಂಬುದು ಜಿಲ್ಲೆಯ ಅಡಿಕೆ ಬೆಳೆಗಾರರ ಅಳಲು.

ಅಡಿಕೆ ಕಾಯಿ ಕಚ್ಚುವ ಸಂದರ್ಭದಲ್ಲಿ ವಿಪರೀತ ಕಾಡುತ್ತಿದ್ದ ಮಂಗಗಳು ಪ್ರಸ್ತುತ ಅಡಿಕೆ ಗೋಟು (ಹಣ್ಣಡಿಕೆ) ಆಗುವ ಸಮಯಕ್ಕೆ ಸರಿಯಾಗಿ ತೋಟಗಳಲ್ಲಿ ಹಾವಳಿ ತೀವ್ರ ಮಾಡುತ್ತಿವೆ. ಯಾವುದೇ ತಂತ್ರಗಳಿಗೆ ವಾನರ ಗುಂಪು ತಲೆ ಬಾಗದ ಕಾರಣ ಅವುಗಳ ನಿಯಂತ್ರಣಕ್ಕೆ ಬೆಳೆಗಾರರು ಹೈರಾಣಾಗಿದ್ದಾರೆ. ಮಳೆಗಾಲ, ಬೇಸಿಗೆ ಕಾಲ, ಚಳಿಗಾಲ ಎನ್ನದೇ ಕೃಷಿ ಕ್ಷೇತ್ರಕ್ಕೆ ಹಿಂಡುಹಿಂಡಾಗಿ ನುಗ್ಗುವ ಮಂಗಗಳು ಅಡಿಕೆಯ ಜತೆಗೆ ತೆಂಗಿನ ಫಸಲು ನಷ್ಟ ಮಾಡುತ್ತಿದ್ದು ಬೆಳೆಗಾರರನ್ನು ಕಂಗೆಡಿಸಿದೆ.

‘ಮಂಗಗಳ ಕಾಟ ಒಂದೆರೆಡು ವರ್ಷಗಳಿಂದ ಈಚೆಗೆ ಮಿತಿ ಮೀರಿದೆ. ಹಿಂಡು ಹಿಂಡಾಗಿ ತೋಟಗಳಿಗೆ ನುಗ್ಗಿ ಅಡಿಕೆ ಎಳೆಯ ಕಾಯಿಯನ್ನು ಸಿಗಿದು ಹಾಕುವುದಲ್ಲದೆ ಎಳನೀರನ್ನು ಕೆಳಕ್ಕೆ ಉರುಳಿಸಿ ಫಸಲು ನಷ್ಟ  ಮಾಡುತ್ತಿದೆ. ಏರ್‌ಗನ್, ಪಟಾಕಿಗಳ ಸದ್ದಿಗೆ ಹೆದರದ ಮಂಗಗಳನ್ನು ಓಡಿಸಲಾಗದೆ ರೈತ ಅಸಹಾಯಕ ಸ್ಥಿತಿಯಲ್ಲಿ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಬೆಳೆಗಾರ ನಾರಾಯಣ ಹೆಗಡೆ. 

ADVERTISEMENT

‘ಕಳೆದ ವರ್ಷ ಎಳೆಯ ಕಾಯಿಗಳನ್ನು ನಾಶ ಮಾಡಿದ್ದ ಮಂಗಗಳು ಈಗ ಬಲಿತ ಕಾಯಿಗಳನ್ನು, ಗೋಟಡಕೆಯನ್ನು ಹಾಳು ಮಾಡುತ್ತಿವೆ. ಅರಣ್ಯದಂಚಿನ ಅಡಿಕೆ ತೋಟಗಳಲ್ಲಿ ಬಹುತೇಕ ಇದೇ ಪರಿಸ್ಥಿತಿಯಿದೆ. ವಾರ್ಷಿಕ ಕೋಟ್ಯಂತರ ರೂಪಾಯಿ ರೈತರಿಗೆ ನಷ್ಟವಾಗುತ್ತಿದ್ದು, ಸರ್ಕಾರ, ಅರಣ್ಯ ಇಲಾಖೆ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿವೆ’ ಎನ್ನುತ್ತಾರೆ ಅವರು. 

‘ತೆಂಗಿನ ಮರಕ್ಕೆ ಮಂಗವೊಂದು ದಾಳಿ ಮಾಡಿದರೆ ಆ ಮರದ ಶೇ 60ರಿಂದ 70ರಷ್ಟು ಫಸಲು ನಷ್ಟ ಆಗುವುದಲ್ಲೇ ತೋಟದ ಮಧ್ಯೆ ಇರುವ ಉಪ ಬೆಳೆಗಳಿಗೂ ಹಾನಿ ಮಾಡುತ್ತಿದೆ’ ಎನ್ನುತ್ತಾರೆ ತೆಂಗು ಬೆಳೆಗಾರರು.

ಬೆಳೆ ನಷ್ಟಕ್ಕೆ ಇಲ್ಲದ ಪರಿಹಾರ ದಶಕಗಳಿಂದ ಬೆಳೆಗಾರರಿಗೆ ಅಪಾರ ಹಾನಿ ಸೂಕ್ತ ಯೋಜನೆ ರೂಪಿಸಲು ಆಗ್ರಹ

ಕಾಡು ಪ್ರಾಣಿಗಳಿಂದ ಅಡಿಕೆ ಮರಕ್ಕೆ ನಷ್ಟವಾದರೆ ಪರಿಹಾರ ನೀಡಬಹುದೇ ಹೊರತು ಅಡಿಕೆ ಉತ್ಪನ್ನ ನಷ್ಟವಾದರೆ ಪರಿಹಾರಕ್ಕೆ ಅವಕಾಶವಿಲ್ಲ
ಸಂದೀಪ ಸೂರ್ಯವಂಶಿ ಡಿಸಿಎಫ್ ಶಿರಸಿ 

ನಿಗದಿಯಾಗದ ದರಪಟ್ಟಿ ‘ಕಾಡುಕೋಣ ಆನೆ ಮೊದಲಾದ ವನ್ಯಜೀವಿಗಳ ಉಪಟಳದಿಂದ ಬೆಳೆಹಾನಿ ಸಂಭವಿಸಿದಲ್ಲಿ ಸರ್ಕಾರದಿಂದ ಪರಿಹಾರ ಪಡೆಯಬಹುದು. ಆದರೆ ಮಂಗಗಳಿಂದ ಉಂಟಾಗುವ ಹಾನಿಗೆ ಪರಿಹಾರ ಇಲ್ಲ. ಮಂಗನಿಂದ ಕೃಷಿ ಫಸಲು ನಷ್ಟಕ್ಕೆ ಪರಿಹಾರ ನೀಡಲು ಸರ್ಕಾರ ಹತ್ತು ವರ್ಷದ ಹಿಂದೆ ಸುತ್ತೋಲೆ ಹೊರಡಿಸಿತ್ತು. ಆದರೆ ಫಸಲಿಗೆ ಇಂತಿಷ್ಟು ದರ ಎಂದು ನಿಗದಿಪಡಿಸದ ಕಾರಣ ನಷ್ಟಕ್ಕೆ ಈಡಾದ ಬೆಳೆಗಾರರಿಗೆ ಇದರಿಂದ ಪ್ರಯೋಜನ ಸಿಗುತ್ತಿಲ್ಲ. ಈ ತನಕವೂ ಇತ್ಯರ್ಥ ಆಗದ ಕಾರಣ ನಷ್ಟಕ್ಕೆ ನಯಾಪೈಸೆ ಪರಿಹಾರ ಸಿಗದ ಸ್ಥಿತಿ ಇದೆ’ ಎಂಬುದು ರೈತರ ಆರೋಪವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.