ಕಾರವಾರ: ಅರಬ್ಬಿ ಸಮುದ್ರದ ವಾಯವ್ಯ ಭಾಗದಲ್ಲಿ ಮೇ 14ರಂದು ವಾಯುಭಾರ ಕುಸಿತವಾಗುವ ಸಾಧ್ಯತೆಯಿದೆ. ಮೇ 15ರಂದು ಅದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಂದು ಜಿಲ್ಲೆ ಒಳಗೊಂಡು ರಾಜ್ಯದ ಕರಾವಳಿಯಲ್ಲಿ ವೇಗವಾಗಿ ಗಾಳಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿರುವ ಮೀನುಗಾರರು ಮೇ 12ರ ರಾತ್ರಿಯೊಳಗೆ ದಡಕ್ಕೆ ಹಿಂದಿರುಗಬೇಕು. ಸಂಭಾವ್ಯ ಚಂಡಮಾರುತ ಎದುರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಇಲಾಖೆ ತಿಳಿಸಿದೆ ಎಂದು ಜಿಲ್ಲಾಡಳಿತದ ಹೇಳಿಕೆ ಹೇಳಿದೆ.
ಆ ಸಂದರ್ಭದಲ್ಲಿ ತುರ್ತು ಸೇವೆಗೆ ನಿಯಂತ್ರಣ ಕೊಠಡಿಯ 24x7 ಟೋಲ್ ಫ್ರೀ ಸಂಖ್ಯೆ 1077 ಅಥವಾ ವಾಟ್ಸ್ಆ್ಯಪ್: 94835 11015 ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ಗುಜರಾತ್ ಕರಾವಳಿಯ ಪ್ರದೇಶದಲ್ಲಿ ಅಂದು ಬೆಳಿಗ್ಗೆ ವಾಯುಭಾರ ಕುಸಿತವಾದರೆ ಚಂಡಮಾರುತವು ಓಮನ್ ಕರಾವಳಿ, ಪಾಕಿಸ್ತಾನ ಹಾಗೂ ಗುಜರಾತ್ನ ಕಛ್ ಮೂಲಕ ಮೇ 20ರಂದು ಸಾಗುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಅರಬ್ಬಿ ಸಮುದ್ರವು ಪ್ರಕ್ಷುಬ್ಧವಾಗಲಿದ್ದು, ಮಹಾರಾಷ್ಟ್ರ, ಕರ್ನಾಟಕದ ಕರಾವಳಿ, ಕೇರಳ, ಲಕ್ಷದ್ವೀಪ ಮತ್ತು ತಮಿಳುನಾಡಿನ ಕೆಲವೆಡೆ ಭಾರಿ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಇದು ದೇಶದಲ್ಲಿ ಈ ವರ್ಷದ ಮೊದಲ ಚಂಡಮಾರುತವಾಗಲಿದ್ದು, ಮಯನ್ಮಾರ್ ದೇಶವು ಇದಕ್ಕೆ ‘ಟೌಕ್ಟೇ’ (ಹಲ್ಲಿ) ಎಂದು ಹೆಸರಿಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.