ADVERTISEMENT

ದಾಂಡೇಲಿ: ಅದ್ದೂರಿ ದಾಂಡೇಲಪ್ಪನ ಜಾತ್ರೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 4:30 IST
Last Updated 3 ಅಕ್ಟೋಬರ್ 2025, 4:30 IST
ದಾಂಡೇಲಿ ತಾಲ್ಲೂಕಿನ ಹಾಲಮಡ್ಡಿಯಲ್ಲಿ ಇರುವ ದಾಂಡೇಲಪ್ಪನ ದೇವಸ್ಥಾನದಲ್ಲಿ ಜಾತ್ರೆಯ ನಿಮಿತ್ತ ಭಕ್ತರು ದರ್ಶನ ಪಡೆದರು
ದಾಂಡೇಲಿ ತಾಲ್ಲೂಕಿನ ಹಾಲಮಡ್ಡಿಯಲ್ಲಿ ಇರುವ ದಾಂಡೇಲಪ್ಪನ ದೇವಸ್ಥಾನದಲ್ಲಿ ಜಾತ್ರೆಯ ನಿಮಿತ್ತ ಭಕ್ತರು ದರ್ಶನ ಪಡೆದರು   

ದಾಂಡೇಲಿ: ತಾಲ್ಲೂಕಿನ ಸುಪ್ರಸಿದ್ಧ ದಾಂಡೇಲಿ ಗ್ರಾಮ ದೇವರಾದ ದಾಂಡೇಲಪ್ಪಾ ಜಾತ್ರಾ ಮಹೋತ್ಸವವು ಗುರುವಾರ ಅದ್ದೂರಿಯಾಗಿ ನಡೆಯಿತು. ಧರ್ಮ ಸಮನ್ವಯ ಸಾರುವ ಜಾತ್ರೆಗೆ ಸಹಸ್ರಾರು ಸಂಖ್ಯೆಯ ಭಕ್ತರು ದಾಂಡೇಲಪ್ಪ ದೇವರ ದರ್ಶನ ಪಡೆದು ಪುನೀತರಾದರು.

ದಾಂಡೇಲಿ ಮಿರಾಶಿ ಗಲ್ಲಿಯ ರುಂಡ ಇರುವ ದೇವಸ್ಥಾನದಿಂದ 4 ಕಿ.ಮೀ ದೂರದ ಹಾಲಮಡ್ಡಿಯಲ್ಲಿ ಮುಂಡ ಇರುವ ದೇವಸ್ಥಾನಕ್ಕೆ ಮಹಿಳೆಯರು ಪೂರ್ಣ ಕುಂಭ, ಸಾಂಪ್ರದಾಯಿಕ ಮಂಗಳವಾದ್ಯ, ಭಜನ ಹಾಗೂ ಜಯ ಘೋಷದೊಂದಿಗೆ ಬೆಳಗಿನ ಜಾವ ಮಿರಾಶಿ ಕುಟುಂಬದವರ ನೇತೃತ್ವದಲ್ಲಿ ಮಿರಾಶಿಗಲ್ಲಿಯಿಂದ ಪಲ್ಲಕ್ಕಿ ಮೆರವಣಿಗೆ ಹೊರಟಿತು. ದಾಂಡೇಲಪ್ಪ ದೇವರ ಬೆಳ್ಳಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಹಾಲಮಡ್ಡಿಯ ದೇವಸ್ಥಾನಕ್ಕೆ ಕರೆ ತಂದ ನಂತರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗುರುದತ್ತ ಮಿರಾಶಿ ಹಾಗೂ ಇತರರು ಜಾತ್ರೆಗೆ ಚಾಲನೆ ನೀಡಿದರು.

ಗುರುವಾರ ಬೆಳಗಿನ ಜಾವ 4 ಗಂಟೆಯಿಂದ ರಾತ್ರಿ 11ರ ವರೆಗೆ ಜನರು ದೇವರ ದರ್ಶನ ಪಡೆದರು. ಹರಕೆ ಹೊತ್ತು ಮಕ್ಕಳನ್ನು ಪಡೆದ ತಂದೆ-ತಾಯಿಗಳನ್ನು ತಮ್ಮಮಕ್ಕಳ ತೂಕಕ್ಕೆ ಸಮಾನವಾಗಿ ದವಸ, ಧಾನ್ಯಗಳನ್ನು ತುಲಾಭಾರ ಸೇವೆ ಮಾಡಿ ಸಂಭ್ರಮಿಸಿದರು.

ADVERTISEMENT

ಗಾಂಧಿ ಜಯಂತಿ ಪ್ರಯುಕ್ತ ಪ್ರಾಣಿ ಬಲಿಯನ್ನು ನಿಷೇಧಿಸಿರುವ ಕಾರಣಕ್ಕೆ ಭಕ್ತರು ದೇವಸ್ಥಾನದಿಂದ ದೂರದಲ್ಲಿ ಕುರಿ, ಕೋಳಿ ಬಲಿ ನೀಡಿ ಅಡುಗೆ ಮಾಡಿ, ದೇವರಿಗೆ ನೈವೇದ್ಯ ನೀಡಿದರು.

ರಾಜಸ್ಥಾನಿ ಸೇವಾ ಮಂಡಳಿ, ಲಾರಿ ಮಾಲೀಕ ಹಾಗೂ ಚಾಲಕರ ಸಂಘದ ವತಿಯಿಂದ ಫಲಹಾರ, ಬೆಲ್ಲದ ನೀರಿನ ವಿತರಣೆ ಹಾಗೂ ಗಜಾನನ ಯುವಕ ಮತ್ತು ಯುವತಿ ಮಂಡಳ ವತಿಯಿಂದ ಮಹಾಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಘಟಕರು ಸಂಜೆ ಪ್ರಸಾದ ವಿತರಿಸಿದರು.

ದಾಂಡೇಲಪ್ಪನ ಜಾತ್ರಾ ಮಹೋತ್ಸವ ಮತ್ತು ರಾಮಲೀಲಾ ನೋಡಲು ತಾಲ್ಲೂಕು ಸೇರಿದಂತೆ ಉತ್ಸವಕ್ಕೆ ತಾಲ್ಲೂಕು ಧಾರವಾಡ, ಬೆಳಗಾವಿ, ಹಳಿಯಾಳ,ಗೋವಾ, ಯಲ್ಲಾಪುರ ಸೇರಿದಂತೆ 50ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ನಗರದ ಚನ್ನಮ್ಮ ವೃತ್ತದಿಂದ ಹಾಲಮಡ್ಡಿತನಕ ವಾಹನ ದಟ್ಟಣೆ ಉಂಟಾಗಿತ್ತು. ಪೊಲೀಸ್ ಇಲಾಖೆ 500ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ನಿತೋಜಿಸಿ ಬಂದೋಬಸ್ತ್ ಕೈಗೊಂಡಿತ್ತು.

ಜಾತ್ರಾ ಕಮಿಟಿಯ ಅಧ್ಯಕ್ಷ ಗುರುದತ್ತ ಮಿರಾಶಿ, ವಾಮನ ಮಿರಾಶಿ, ಅರ್ಜುನ ಮಿರಾಶಿ, ಗೋಪಾಲ ಮಿರಾಶಿ, ಮಾರುತಿ ಕಮರೇಕರ , ಲಕ್ಷ್ಮಣ ಜಾದವ್, ಗಣಪತಿ ಬೇಕಣಿ, ಕೃಷ್ಣಾ ಪೂಜಾರಿ, ಮಹಾವೀರ ನರಲೇಕರ, ದೇವಿಂದ್ರ ಬೇಕಣಿ, ಸಾತು ಮಿರಾಶಿ, ಚಾಂದನಾಥ ಚಮಡೆ, ಸಂಜೀವ ತೋಕಡೆ ಮುಂತಾದವರು ಜಾತ್ರಾ ಮಹೋತ್ಸವಕ್ಕೆ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.