ದಾಂಡೇಲಿ: ದಾಂಡೇಲಿ, ಹಳಿಯಾಳ, ಜೊಯಿಡಾ ತಾಲ್ಲೂಕುಗಳಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಾಂಡೇಲಿ ಮಹಾನಾಯಕ ಡಾ.ಅಂಬೇಡ್ಕರ ಅಭಿಮಾನಿ ಸೇನೆ ಹಾಗೂ ಆದಿ ಜಾಂಬವಂತ ಸಂಘಟನೆಯ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಲಿಖಿತ ದೂರು ಹಾಗೂ ಮನವಿ ಸಲ್ಲಿಸಿದರು.
‘ಹಳಿಯಾಳ ಹೆಸ್ಕಾಂ ಕಾರ್ಯನಿರ್ವಹಣಾಧಿಕಾರಿ 13 ವರ್ಷಗಳಿಂದ ಒಂದೇ ಕಡೆ ಕೆಲಸದಲ್ಲಿದ್ದು ವಿದ್ಯುತ್ ಬಿಲ್ಗೆ ಸಂಬಂಧಿಸಿ ಬಡವರಿಗೆ ತೊಂದರೆ ನೀಡುತ್ತಿದ್ದಾರೆ. ಜೊಯಿಡಾ ತಾಲ್ಲೂಕಿನ ಕುಂಬಾರವಾಡ ವಲಯ ಅರಣ್ಯ ಅಧಿಕಾರಿ ಬೆಂಕಿ ಕಾವಲುಗಾರರನ್ನು ನೇಮಕಾತಿ ಮಾಡಿಕೊಳ್ಳದೇ ಆ ಹಣವನ್ನು ದುರುಪಯೋಗ ಮಾಡಿಕೊಂಡು ಭ್ರಷ್ಟಾಚಾರ ಮಾಡಿದ್ದಾರೆ. ಆಲೂರು ಗ್ರಾಮ ಪಂಚಾಯತಿ ಪಿಡಿಒ ಅವರನ್ನು ಭ್ರಷ್ಟಾಚಾರದ ಕಾರಣ ಅಮಾನತುಗೊಳಿಸಬೇಕು. ಉಳಿದ ಭ್ರಷ್ಟಾಚಾರಿ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸೇನೆ ಹಾಗೂ ಆದಿ ಜಾಂಬವಂತ ಸಂಘಟನೆಯ ಸಂಸ್ಥಾಪಕ ಉಪಾಧ್ಯಕ್ಷ ಚಂದ್ರಕಾಂತ ನಡಿಗೇರಿ, ಜಿಲ್ಲಾಧ್ಯಕ್ಷ ಬಸವರಾಜ ಹರಿಜನ, ಎಚ್.ಪಿ. ಗೋಪಾಲ, ರಾಘು, ಸುನಿಲ, ಸತೀಶ ಚೌಹಾಣ್, ಸರಸ್ವತಿ ಚವ್ಹಾಣ, ರೇಣುಕಾ ಮಾದರ, ಯಶ್ವಂತ, ಪ್ರೀತಿ ಹಾಗೂ ಸಂಘಟನೆಯ ಪ್ರಮುಖರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.