ಶಿರಸಿ: ತಾಲ್ಲೂಕಿನ ಹಾರೂಗಾರ ಸಮೀಪ ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ ತಿರುವುದು ಅಪಾಯಕಾರಿಯಾಗಿ ಪರಿಣಮಿಸಿದ್ದು ವಾಹನಗಳು ಸತತವಾಗಿ ಇಲ್ಲಿ ಪಲ್ಟಿಯಾಗುತ್ತಿವೆ.
ಗೋಳಿ ಕ್ರಾಸ್ ಬಳಿಕ ಇರುವ ಇಳಿಜಾರು ಮತ್ತು ಹಾರೂಗಾರಿನ ಗದ್ದೆಯ ಬಳಿಯ ತಿರುವಿನಲ್ಲಿ ಈಚೆಗೆ ಅಪಘಾತಗಳು ಸಂಭವಿಸುವ ಪ್ರಮಾಣ ಹೆಚ್ಚಿದೆ. ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಿಸುತ್ತಿರುವುದೇ ಇದಕ್ಕೆ ಕಾರಣ ಎಂಬ ಆರೋಪವನ್ನು ಸಾರ್ವಜನಿಕರು ಮಾಡಿದ್ದಾರೆ.
ಪಲ್ಟಿಯಾಗಿ ಬಿದ್ದಿರುವ ವಾಹನಗಳಲ್ಲಿ ಹೆಚ್ಚಿನವು ಸರಕು ಸಾಗಣೆ ವಾಹನಗಳಾಗಿವೆ. ದ್ವಿಚಕ್ರ ವಾಹನ ಸವಾರರು, ಕಾರುಗಳ ಅಪಘಾತಗಳು ಆಗಾಗ ಸಂಭವಿಸುತ್ತಿದೆ.
‘ಇಳಿಜಾರು ಮುಗಿದ ಬಳಿಕ ಎದುರಾಗುವ ಅಪಾಯಕಾರಿ ತಿರುವಿನಲ್ಲೇ ರಸ್ತೆ ಕಾಮಗಾರಿ ನಡೆಸಿಲ್ಲ. ಮೊದಲಿದ್ದ ಡಾಂಬರು ರಸ್ತೆಯನ್ನು ಅಗೆದಿಟ್ಟಿದ್ದಾರೆ. ಕಾಂಕ್ರೀಟ್ ರಸ್ತೆಯಲ್ಲಿ ವೇಗವಾಗಿ ಸಾಗುವ ವಾಹನ ಚಾಲಕರು ಏಕಾಏಕಿ ಕ್ಛ ರಸ್ತೆ ಎದುರಾಗುವ ಅಪಾಯ ಅರಿಯದೆ ಅಪಘಾತ ಸಂಭವಿಸುತ್ತಿದೆ’ ಎನ್ನುತ್ತಾರೆ ಸ್ಥಳೀಯರಾದ ಸತ್ಯನಾರಾಯಣ ಹೆಗಡೆ.
ಪ್ರತಿನಿತ್ಯ ಇದೇ ರಸ್ತೆಯಲ್ಲಿ ಸಾಗುವಾಗ ಕನಿಷ್ಠ ಎರಡರಿಂದ ಮೂರು ವಾಹನಗಳು ಅಪಘಾತಕ್ಕೀಡಾಗುವುದನ್ನು ನೋಡುತ್ತಿದ್ದೇವೆ. ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡದ ಪರಿಣಾಮ ಸಮಸ್ಯೆ ಉಂಟಾಗಿದೆ’ ಎನ್ನುತ್ತಾರೆ ವಾಹನ ಚಾಲಕ ಸುರೇಶ್ ಅಂಬಿಗ.
‘ರಭಸದ ಮಳೆ ಆರಂಭವಾದ ಕಾರಣ ಹಾರೂಗಾರ ಬಳಿ ತಿರುವಿನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಸಾಧ್ಯವಾಗಿಲ್ಲ. ಅಪಘಾತಗಳು ಸಂಭವಿಸುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಸುಕ್ಷತಾ ಕ್ರಮವಾಗಿ ಇಳಿಜಾರಿನ ಮುನ್ನ ವಾಹನಗಳ ವೇಗ ನಿಯಂತ್ರಿಸಲು ಬ್ಯಾರಿಕೇಡ್ ಅಳವಡಿಸಲಾಗುವುದು’ ಎಂದು ಕಾಮಗಾರಿ ನಡೆಸುತ್ತಿರುವ ಆರ್.ಎನ್.ಎಸ್.ಇನ್ಫ್ರಾಸ್ಟ್ರಕ್ಚರ್ ಕಂಪನಿಯ ಹೆದ್ದಾರಿ ಎಂಜಿನಿಯರ್ ಗೋವಿಂದ ಭಟ್ಟ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.