ಗೋಕರ್ಣ: ಗೋಕರ್ಣದ ನಾಗಬೀದಿಯಲ್ಲಿರುವ ಪುರಾಣ ಪ್ರಸಿದ್ಧ ನಾಗೇಶ್ವರ ಲಿಂಗಕ್ಕೆ ಶುಕ್ರವಾರ ನಾಗರಪಂಚಮಿ ಅಂಗವಾಗಿ ಅಪಾರ ಸಂಖ್ಯೆಯ ಭಕ್ತರು ಪೂಜೆ ಸಲ್ಲಿಸಿದರು.
ನಾಗರಪಂಚಮಿ ಶುಕ್ರವಾರ ಬಂದಿದ್ದರಿಂದ ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಹಳ್ಳಿಯ ಜನರಲ್ಲದೇ ಬೇರೆ ಊರಿನ ಜನರೂ ನಾಗೇಶ್ವರ ದೇವಸ್ಥಾನದ ಆವರಣದಲ್ಲಿ ತಾವೇ ಪ್ರತಿಷ್ಠೆ ಮಾಡಿದ ನಾಗರ ಕಲ್ಲಿಗೆ ನೀರು, ಹಾಲು ಹಾಕಿ ಪೂಜೆ ಮಾಡಿದರು. ಮಳೆ ಬಿಡುವುದು ನೀಡಿದ್ದರಿಂದ ಸಂಭ್ರಮದಿಂದ ಆಚರಿಸಿದರು.
ಸರ್ಪ ದೋಷವಿರುವವರು ಇಲ್ಲಿ ಬಂದು ಪೂಜೆ ಮಾಡಿದರೆ ಇಷ್ಟಾರ್ಥ ಸಿದ್ದಿಸುತ್ತದೆ ಎಂಬ ಪ್ರತೀತಿ ಪುರಾತನ ಕಾಲದಿಂದಲೂ ಇದೆ. ಅದರಂತೆ ಪ್ರತಿ ವರ್ಷ ಸುತ್ತಮುತ್ತಲಿನ ಹಳ್ಳಿಯ ಜನ ಸೇರಿದಂತೆ ನಾಡಿನಾದ್ಯಂತ ಸಾವಿರಾರು ಜನ ನಾಗರಪಂಚಮಿಯ ದಿನ ಪೂಜೆ ಸಲ್ಲಿಸಲು ಇಲ್ಲಿಗೆ ಬರುತ್ತಾರೆ.
ಮುಖ್ಯ ಅರ್ಚಕ ವೇ. ನಾಗರಾಜ ದತ್ತಾತ್ರೆಯ ಜೋಗಭಟ್ ತಮ್ಮ ಸಹ ವೈದಿಕರೊಂದಿಗೆ ಭಕ್ತರ ಎಲ್ಲಾ ಪೂಜಾ ಕಾರ್ಯಗಳನ್ನೂ ನೆರವೇರಿಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.