
ಶಿರಸಿ: ‘ಗ್ರಾಮೀಣ ಭಾಗದ ಜನರಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಹಾಗೂ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವುದು ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಾಗಾರದ ಮುಖ್ಯ ಉದ್ದೇಶ’ ಎಂದು ಸಂಪನ್ಮೂಲ ವ್ಯಕ್ತಿ ಮಹಮದ್ ಅರ್ಷದ್ ಹೇಳಿದರು.
ಅವರು ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಘದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಐದು ದಿನಗಳ ನಿರ್ವಹಣಾ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
‘ಯಾವುದೇ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುವ ಮೊದಲು ಬೇಕಾದ ಲೈಸೆನ್ಸ್ ಹಾಗೂ ವಿತರಣಾ ಕ್ರಮಗಳ ಬಗ್ಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಹೊರಗೆ ಸಾವಿರಾರು ರೂಪಾಯಿ ವೆಚ್ಚದ ಈ ಕೋರ್ಸ್ ಅನ್ನು ಭಾರತ ಸರ್ಕಾರವು ಉಚಿತವಾಗಿ ನೀಡುತ್ತಿದ್ದು, ಪ್ರಮಾಣಪತ್ರವನ್ನೂ ವಿತರಿಸಲಿದೆ. ಇದನ್ನು ಬಳಸಿಕೊಂಡು ಪ್ರತಿಯೊಬ್ಬರೂ ಸ್ವಂತ ಉದ್ಯೋಗಿಗಳಾಗಬೇಕು’ ಎಂದು ಅವರು ಕರೆ ನೀಡಿದರು.
ಕದಂಬ ಮಾರ್ಕೆಟಿಂಗ್ನ ವಿಶ್ವೇಶ್ವರ ಭಟ್ ಮಾತನಾಡಿ, ‘ಸಮಾಜದ ಏಳಿಗೆಗಾಗಿ ಹಾಗೂ ಜಿಲ್ಲೆಯ ಉತ್ಪನ್ನಗಳು ದೇಶದಾದ್ಯಂತ ಗುರುತಿಸಿಕೊಳ್ಳಲಿ ಎಂಬ ಆಶಯದಿಂದ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಮನೆಯಲ್ಲೇ ಉತ್ಪನ್ನ ತಯಾರಿಸುವ ಮಹಿಳೆಯರಿಗೆ ಇದು ಬದುಕು ಕಟ್ಟಿಕೊಡಬಲ್ಲದು’ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕ ನಾರಾಯಣ ಹೆಗಡೆ, ಎಸ್.ಆರ್.ಭಟ್, ಸುಜಯ್ ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.