ಶಿರಸಿ: ‘ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೆ.19 ರಂದು ತಾಲ್ಲೂಕಿನ ಯಡಹಳ್ಳಿಯಲ್ಲಿ ಜಿಲ್ಲಾಮಟ್ಟದ ನಾಟಕ ಸ್ಪರ್ಧೆ ಆಯೋಜಿಸಲಾಗಿದೆ’ ಎಂದು ಅಕಾಡೆಮಿ ಸದಸ್ಯ ಗಣಪತಿ ಹಿತ್ಲಕೈ ತಿಳಿಸಿದರು.
‘ರಂಗಭೂಮಿ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿ, ಅವರ ಪ್ರತಿಭೆ ಮುನ್ನೆಲೆಗೆ ತರಲು ಈ ಸ್ಪರ್ಧೆ ಆಯೋಜಿಸಲಾಗಿದೆ’ ಎಂದು ಇಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
‘ಸ್ಪರ್ಧೆಯಲ್ಲಿ ಸರ್ಕಾರಿ, ಖಾಸಗಿ ಶಾಲೆ ಕನ್ನಡ ಅಥವಾ ಇತರೆ ಮಾಧ್ಯಮದ ಯಾವುದೇ ಶಾಲೆ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಳ್ಳಬಹುದು. ಸ್ಪರ್ಧೆಯಲ್ಲಿ ಸಾಮಾಜಿಕ, ಜನಪದ, ಹಾಸ್ಯ, ಪೌರಾಣಿಕ, ಐತಿಹಾಸಿಕ ಕನ್ನಡ ನಾಟಕ ಪ್ರದರ್ಶನಕ್ಕೆ ಮಾತ್ರ ಅವಕಾಶವಿದೆ. ಪ್ರತಿ ನಾಟಕದ ಅವಧಿ 30 ರಿಂದ 45 ನಿಮಿಷಕ್ಕೆ ಸೀಮಿತವಾಗಿರಲಿದೆ’ ಎಂದರು.
‘ಬೋಧಕ, ಬೋಧಕೇತರ ಸಿಬ್ಬಂದಿ ಅಥವಾ ರಂಗಪದವೀಧರರು ನಿರ್ದೇಶಿಸಲು ಅವಕಾಶವಿದೆ. ಪ್ರತಿ ತಾಲ್ಲೂಕಿನಿಂದ ಕನಿಷ್ಠ ಒಂದು ಶಾಲೆಯ ತಂಡವಾದರೂ ನೇರವಾಗಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ತಂಡಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಕಳಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.