ಶಿರಸಿ: ‘ನಗರದ ಯಲ್ಲಾಪುರ ರಸ್ತೆ ಬಳಿ ಮಳೆ ನೀರು ಹರಿಯುತ್ತಿದ್ದ ಚರಂಡಿಯನ್ನು ಪಾದುಕಾಶ್ರಮದ ಪ್ರಮುಖರು ಬಂದ್ ಮಾಡಿದ್ದರು. ಚರಂಡಿ ಬಂದಾಗಿದ್ದರಿಂದ ಸೋಮವಾರ ರಾತ್ರಿ ಸುರಿದ ಮಳೆಗೆ ನೀರು ಮನೆಯೊಳಗೆ ನುಗ್ಗಿದೆ. ಇದನ್ನು ಕೂಡಲೇ ತೆರವುಗೊಳಿಸದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು’ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
‘ಸೋಮವಾರ ಒಂದು ತಾಸು ಮಳೆ ಸುರಿಯಿತು. ಇದರಿಂದ ರಸ್ತೆ ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿತು. ಇಷ್ಟು ವರ್ಷಗಳ ಕಾಲ ಮಳೆಗಾಲದ ನೀರು ಸರಾಗವಾಗಿ ಹರಿದು ಹುಬ್ಬಳ್ಳಿ ರಸ್ತೆ ಮೂಲಕ ಮುಂದೆ ಕಾಲುವೆ ಸೇರುತ್ತಿತ್ತು. ಆದರೆ, ಏಕಾಏಕಿ ಪಾದುಕಾಶ್ರಮದವರು ಚರಂಡಿಗೆ ಕಲ್ಲು ಮತ್ತು ಸಿಮೆಂಟ್ನಿಂದ ಕಟ್ಟೆ ಕಟ್ಟಿ ಬಂದ್ ಮಾಡಿದ್ದಾರೆ. ಮೊದಲ ಮಳೆಗೆ ನೀರು ನುಗ್ಗಿದೆ. ಇನ್ನು ಮಳೆಗಾಲ ಆರಂಭವಾದ ಜನರ ಸಮಸ್ಯೆ ಹೇಳತೀರದು’ ಎಂದು ಅವರು ದೂರಿದ್ದಾರೆ.
ಜನರ ದೂರು ಆಧರಿಸಿ, ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ಪೌರಾಯುಕ್ತ ರಮೇಶ ನಾಯಕ, ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಉಮೇಶ, ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ, ಸಿಪಿಐ ಪ್ರದೀಪ ಬಿ.ಯು, ಮಾರುಕಟ್ಟೆ ಠಾಣೆ ಪಿಎಸ್ಐ ನಾಗಪ್ಪ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗುಂಪಾಗಿ ಸೇರಿದ್ದ ಜನರನ್ನು ಚದುರಿಸಿ, ಮನೆಗೆ ಕಳುಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.