ಜೊಯಿಡಾ: ಶಿಕ್ಷಣ ಸಮಾಜದ ಮೂಲ ಬೇರು. ಮಕ್ಕಳು ವಿದ್ಯಾಭ್ಯಾಸದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು, ಶಿಕ್ಷಣ ಬಡವರಿಗೆ ಹೊರೆಯಾಗಬಾರದು. ಎಲ್ಲರೂ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕು ಎಂದು ಗೋವಾ ರಾಜ್ಯ ವಿಧಾನಸಭಾಧ್ಯಕ್ಷ ರಮೇಶ್ ತವಡಕರ ಹೇಳಿದರು.
ಅವರು ಶನಿವಾರ ಜೊಯಿಡಾ ಕುಣಬಿಭವನದಲ್ಲಿ ತಾಲ್ಲೂಕು ಕುಣಬಿ ಸಮಾಜ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಗಳಲ್ಲಿ ಶೇ 90 ಕ್ಕಿಂತ ಹೆಚ್ಚು ಅಂಕ ಪಡೆದ ಕುಣಬಿ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ತಂದೆ ತಾಯಿ ಇಲ್ಲದ ಎಲ್ಲ ವರ್ಗದ ಮಕ್ಕಳಿಗೆ ನೋಟ್ಬುಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ, ಕ್ರೀಡೆ, ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಕ್ಕಳು ಮುಂದೆ ಬರಬೇಕು. ಪ್ರತಿ ವರ್ಷ 10 ಮಕ್ಕಳಿಗೆ ತಮ್ಮ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲಾಗುವುದು ಎಂದರು.
ಜೊಯಿಡಾ ತಹಶೀಲ್ದಾರ್ ಮಂಜುನಾಥ ಮುನ್ನಳ್ಳಿ ಮಾತನಾಡಿ, ಸರ್ಕಾರ ಬಡ ಮಕ್ಕಳಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಬಾಲ್ಯ ವಿವಾಹವನ್ನು ಸಮಾಜದಲ್ಲಿ ತಡೆ ಹಿಡಿಯಬೇಕು. ಈ ಬಗ್ಗೆ ಶಾಲಾ ಹಂತದಲ್ಲಿ ಮಕ್ಕಳಿಗೆ ಮಾಹಿತಿ ನೀಡುವ ಅಗತ್ಯವಿದೆ ಎಂದರು.
ತಾಲ್ಲೂಕು ಪಂಚಾಯಿತಿ ಇಒ ಭಾರತಿ.ಎನ್ ಮಾತನಾಡಿದರು.
ತಾಲ್ಲೂಕಿನ ಕುಣಬಿ ಸಮಾಜದ ಶೇ 90ಕ್ಕೂ ಹೆಚ್ಚು ಅಂಕ ಗಳಿಸಿದ 22 ಎಸ್ಎಸ್ಎಲ್ಸಿ , 5 ಪಿಯುಸಿ ಮತ್ತು 4 ಡಿಪ್ಲೊಮಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಂದೆ, ತಾಯಿ ಇಲ್ಲದ 233 ನಿರ್ಗತಿಕ ಮಕ್ಕಳಿಗೆ ಉಚಿತವಾಗಿ ನೋಟ್ಬುಕ್ ವಿತರಣೆ ಮಾಡಲಾಯಿತು.
ವೇದಿಕೆಯಲ್ಲಿ ಕುಣಬಿ ಸಮಾಜದ ತಾಲ್ಲೂಕು ಅಧ್ಯಕ್ಷ ಪ್ರೇಮಾನಂದ ವೇಳಿಪ, ಸಂಸ್ಥಾಪಕ ಅಧ್ಯಕ್ಷ ಮಾಬಳು ಕುಂಡಲಕರ, ಕಾರ್ಯದರ್ಶಿ ದಯಾನಂದ ಕುಮಗಾಳಕರ, ಮರಾಠಾ ಸಮಾಜ ಅಧ್ಯಕ್ಷ ಚಂದ್ರಕಾಂತ ದೇಸಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಿಮಾ ಮಿರಾಶಿ, ಪುಷ್ಪಾ ವೇಳಿಪ, ಗೋವಾ ಹೈಕೋರ್ಟ್ ವಕೀಲ ಭುವನೇಶ್ವರ ಫತರಪೇಕರ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.