ಕಾರವಾರ: ಕರಾವಳಿ ಜನರ ಜೀವನಾಡಿಯಾಗಿರುವ ಕೊಂಕಣ ರೈಲ್ವೆ ಮಾರ್ಗದ ವಿದ್ಯುದೀಕರಣ ಕಾಮಗಾರಿ ಭರದಿಂದ ಸಾಗಿದೆ. ಯೋಜನೆಯಂತೆ ಕಾಮಗಾರಿ ಮುಗಿದರೆ, ಈ ವರ್ಷದ ಕೊನೆಯ ವೇಳೆಗೆಈ ಭಾಗದಲ್ಲಿಚುಕುಬುಕು ಸದ್ದು ಕೇಳಿಸದು. ಅಲ್ಲದೇ ನಿಗಮದ ರೈಲುಗಳಿಂದ ವಾಯುಮಾಲಿನ್ಯವೂ ಸಂಪೂರ್ಣವಾಗಿ ನಿಲ್ಲಲಿದೆ.
ಪರಿಸರ ಸ್ನೇಹಿ ಪ್ರಯಾಣಕ್ಕೆ ಆದ್ಯತೆ ನೀಡಿರುವ ಕೊಂಕಣ ರೈಲ್ವೆನಿಗಮವು, ತನ್ನ ಸಂಪೂರ್ಣ 738 ಕಿಲೋಮೀಟರ್ ಉದ್ದದ ಮಾರ್ಗವನ್ನು ವಿದ್ಯುದೀಕರಣ ಮಾಡುತ್ತಿದೆ. ಮಹಾರಾಷ್ಟ್ರದ ರೋಹಾದಿಂದ ಆರಂಭವಾಗಿ ಮಂಗಳೂರು ಸಮೀಪದ ತೋಕೂರಿನವರೆಗೆ ಇರುವ ಈ ಮಾರ್ಗವು,ದೇಶದಲ್ಲಿ ಅತಿ ಹೆಚ್ಚು ರೈಲುಗಳು ಸಂಚರಿಸುವ ಪ್ರದೇಶಗಳಲ್ಲಿಒಂದಾಗಿದೆ. ವಿದ್ಯುದೀಕರಣ ಕಾಮಗಾರಿಯು 2017ರ ನವೆಂಬರ್ನಲ್ಲಿಆರಂಭವಾಗಿದ್ದು,ಈವರೆಗೆ ಶೇ 40ಕ್ಕೂ ಅಧಿಕ ಪೂರ್ಣಗೊಂಡಿದೆ.
ರೋಹಾದಿಂದ ಗೋವಾದ ವೆರ್ನಾದವರೆಗೆ ಎಲ್ ಆ್ಯಂಡ್ ಟಿ ಮತ್ತು ವೆರ್ನಾದಿಂದ ತೋಕೂರುವರೆಗೆಎಸ್.ಟಿ.ಎಸ್ ಕಲ್ಪತರು ಸಂಸ್ಥೆಗಳು ಗುತ್ತಿಗೆ ವಹಿಸಿಕೊಂಡಿವೆ. ಈಕಾಮಗಾರಿ ಪೂರ್ಣಗೊಂಡರೆ ದೇಶದ ಪಶ್ಚಿಮ ಕರಾವಳಿಯ ಬಹುತೇಕ ರೈಲ್ವೆ ಹಳಿಗಳೂ ವಿದ್ಯುದೀಕರಣ ಆದಂತಾಗುತ್ತದೆ. ಇದರಿಂದರೈಲುಗಳ ವೇಗವೂ ಹೆಚ್ಚಾಗಲಿದ್ದು, ಪ್ರಯಾಣದ ಅವಧಿ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಉಡುಪಿ ಜಿಲ್ಲೆಯ ಕುಂದಾಪುರ, ಉತ್ತರ ಕನ್ನಡದ ಭಟ್ಕಳ ಸಮೀಪ ವಿದ್ಯುತ್ ಕಂಬಗಳು, ತಂತಿಗಳು, ವಿದ್ಯುತ್ ಸ್ಟೇಷನ್ಗಳು ಹಾಗೂಇತರ ಉಪಕರಣಗಳನ್ನು ಜೋಡಿಸುವ ಕೆಲಸ ಪ್ರಗತಿಯಲ್ಲಿದೆ. ತೋಕೂರಿನಿಂದ ಉಡುಪಿಯವರೆಗೆ ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು, ಈ ವರ್ಷದ ಆರಂಭದಲ್ಲೇ ಯಶಸ್ವಿ ಪ್ರಾಯೋಗಿಕ ಸಂಚಾರವನ್ನೂ ನಡೆಸಲಾಗಿದೆ.ಬಿಜೂರಿನಿಂದ ವೆರ್ನಾದವರೆಗೆ ಸುಮಾರು 200 ಕಿಲೋಮೀಟರ್ ದೂರದ ಕಾಮಗಾರಿಯು ಈಗ ಪ್ರಗತಿಯಲ್ಲಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಮಿರ್ಜಾನ್ನಲ್ಲಿ ನಿಲ್ದಾಣ: ಕೊಂಕಣ ರೈಲ್ವೆಯು ಉಡುಪಿ ತಾಲ್ಲೂಕಿನ ಇನ್ನಂಜೆ ಮತ್ತು ಕುಮಟಾ ತಾಲ್ಲೂಕಿನ ಮಿರ್ಜಾನ್ಸೇರಿದಂತೆ ಒಟ್ಟು 10ಹೊಸ ನಿಲ್ದಾಣಗಳನ್ನು ತೆರೆಯುತ್ತಿದೆ. ಇವುಗಳ ಕಾಮಗಾರಿಯೂ ಬಹುತೇಕ ಪೂರ್ಣಗೊಂಡಿದ್ದು, ಇನ್ನೊಂದೆರಡು ತಿಂಗಳಲ್ಲಿ ಉದ್ಘಾಟನೆಯಾಗುವ ಸಾಧ್ಯತೆಯಿದೆ. ಮಿರ್ಜಾನ್ ನಿಲ್ದಾಣದಿಂದ ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದ್ದು, ಪ್ರಯಾಣಿಕರು ಕುಮಟಾದವರೆಗೆ ಬರುವ ಸಂದರ್ಭವೂ ತಪ್ಪಲಿದೆ.
ಕೊಂಕಣ ರೈಲ್ವೆ: ಅಂಕಿ ಅಂಶ
₹1,100 ಕೋಟಿ -ವಿದ್ಯುದೀಕರಣದ ವೆಚ್ಚ
738 ಕಿ.ಮೀ - ಕೊಂಕಣ ರೈಲ್ವೆ ಮಾರ್ಗ
67 -ಒಟ್ಟು ನಿಲ್ದಾಣಗಳು
1998ರಲ್ಲಿ -ಪ್ರಯಾಣಿಕರ ರೈಲು ಸಂಚಾರ ಆರಂಭ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.