ಶಿರಸಿ: ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟಿನ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಾಶ ಪ್ರಭು ಅವರನ್ನು ಸನ್ಮಾನಿಸುವುದರೊಂದಿಗೆ ಇಲ್ಲಿನ ಎಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್ ಅಸೋಸಿಯೇಷನ್ ಭಾನುವಾರ ಸರ್ ಎಂ.ವಿಶ್ವೇಶ್ವರಯ್ಯ ಅವರ 159ನೇ ಜನ್ಮದಿನವನ್ನು ಆಚರಿಸಿತು.
‘ಎಂಜಿನಿಯರ್ಗಳು ಕಾಮಗಾರಿ ಗುಣಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಾರದು. ಆಗ ಒಳ್ಳೆಯ ಕೆಲಸಗಳು ಆಗುತ್ತವೆ. ಹೊಂದಾಣಿಕೆ ಮಾಡಿಕೊಳ್ಳದ ಗುಣಮಟ್ಟದ ಕಾಮಗಾರಿ ನಡೆಯಬೇಕೆನ್ನುವ ಪ್ರಜ್ಞೆ ಜಾಗೃತಗೊಳಿಸುವುದೇ ಈ ದಿನ ಆಚರಣೆಯ ಉದ್ದೇಶ. ಬ್ರಿಟಿಷರ ಕಾಲದ ಕಟ್ಟಡಗಳು ಇಂದಿಗೂ ಸುಭದ್ರವಾಗಿವೆ. ಆದರೆ, ಇತ್ತೀಚೆಗೆ ಕಟ್ಟುತ್ತಿರುವ ಕಟ್ಟಡಗಳು ಕುಸಿದು ಬೀಳುತ್ತಿವೆ. ತಂತ್ರಜ್ಞಾನ ಬದಲಾದಂತೆ ಎಂಜಿನಿಯರ್ಗಳ ಜವಾಬ್ದಾರಿ ಕೂಡ ಹೆಚ್ಚುತ್ತದೆ. ಕೌಶಲ ಬಳಸಿ, ಬಾಳಿಕೆ ಬರುವ ಕಟ್ಟಡ ನಿರ್ಮಾಣದ ಬಗ್ಗೆ ಯೋಚಿಸಬೇಕು’ ಎಂದು ಪ್ರಭು ಹೇಳಿದರು.
ಗೊಟಗೋಡಿಯ ಶಿಲ್ಪಕಲಾ ಕುಠೀರದ ಸಂಸ್ಥಾಪಕ ಟಿ.ಬಿ.ಸೊಲಬಕ್ಕನವರ್ ಅವರನ್ನು ಹಾಗೂ ಅವರ ಕಲಾಕೃತಿಗಳನ್ನು ಪರಿಚಯಿಸಲಾಯಿತು.
ಎಂಜಿನಿಯರ್ ಮನು ಹೆಗಡೆ ವಿಶ್ವೇಶ್ವರಯ್ಯನವರ ಜೀವನ ಸಾಧನೆಯ ಕುರಿತ ಚಿತ್ರ ಪ್ರದರ್ಶಿಸಿದರು. ಅಸೋಸಿಯೇಷನ್ ಅಧ್ಯಕ್ಷ ಚಂದನ ಪೈ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ನಾಗೇಂದ್ರ ಭಟ್ಟ, ಕಾರ್ಯದರ್ಶಿ ವಿನಾಯಕ ಗಾಂವಕರ್, ಖಜಾಂಚಿ ಎಲ್.ಆರ್.ಹೆಗಡೆ ಇದ್ದರು.
ಶ್ಯಾಮಸುಂದರ ಭಟ್ಟ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.