ADVERTISEMENT

ಪ್ರಾಕೃತಿಕ ಸೌಹಾರ್ದತೆ ತುರ್ತು ಅಗತ್ಯ: ಉಪ ರಾಷ್ಟ್ರಪತಿ ಜಗದೀಪ್ ಧನಕರ್

​ಪ್ರಜಾವಾಣಿ ವಾರ್ತೆ
Published 5 ಮೇ 2025, 6:49 IST
Last Updated 5 ಮೇ 2025, 6:49 IST
   

ಕಾರವಾರ/ಶಿರಸಿ: 'ವೈದಿಕ ಯುಗದಿಂದಲೂ ಪರಿಸರ ಮತ್ತು ಅರ್ಥ ವ್ಯವಸ್ಥೆ ಪರಸ್ಪರ ಸಾಗಿದೆ. ಪರಿಸರ ನಾಶ ಮಾಡಿ ಅಭಿವೃದ್ಧಿ ಚಟುವಟಿಕೆ ನಡೆಸುವ ಬದಲು ಪ್ರಾಕೃತಿಕ ಸೌಹಾರ್ದ ತುರ್ತು ಅಗತ್ಯ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಪ್ರತಿಪಾದಿಸಿದರು.

ಶಿರಸಿಯ ಅರಣ್ಯ ಕಾಲೇಜು ಆವರಣದಲ್ಲಿ ಸೋಮವಾರ 'ದೇಶ ಕಟ್ಟುವಿಕೆಯಲ್ಲಿ ಅರಣ್ಯ ವಿಜ್ಞಾನದ ಪಾತ್ರ' ವಿಷಯದ ಕುರಿತಾಗಿ ಅರಣ್ಯ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.

ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ಅಭಿವೃದ್ಧಿ ಹೊಂದುವ ಗ್ರಾಹಕರು ನಾವಲ್ಲ. ಅವುಗಳನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಸಾಗುವತ್ತ ಯೋಚಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಪಶ್ಚಿಮ ಘಟ್ಟ ಜಗತ್ತಿನಲ್ಲೇ ಶ್ರೀಮಂತ ಜೀವ ವೈವಿಧ್ಯ ಹೊಂದಿರುವ ತಾಣ. ಇಂತಹ ವಾತಾವರಣದಲ್ಲಿ ವಿದ್ಯಾರ್ಥಿಗಳು ಗೋಡೆಯ ನಡುವೆ ಕಲಿಯುವುದಕ್ಕಿಂತ ವಿಸ್ತಾರ ಪ್ರದೇಶದಲ್ಲಿ ಕಲಿಯಬಹುದು ಎಂದರು.

ಏಲಕ್ಕಿ, ದಾಲ್ಚಿನ್ನಿ, ಕಾಳುಮೆಣಸು ಸೇರಿದಂತೆ ಅನೇಕ ಮಸಾಲೆ ಉತ್ಪನ್ನ ಬೆಳೆಯುವ ಫಲವತ್ತಾದ ಭೂಮಿ ಇದಾಗಿದೆ. ಇಲ್ಲಿನ ಜನರು ಪರಿಸರದೊಂದಿಗೆ ಬದುಕುತ್ತಿದ್ದಾರೆ.

ಪ್ರಕೃತಿ ಕೇವಲ ಮಾನವನಿಗೆ ಸೀಮಿತವಾಗಿಲ್ಲ ಎಂಬ ಸತ್ಯವನ್ನು ಅರಿತುಕೊಳ್ಳಿ. ಪ್ರಾಣಿ ಪಕ್ಷಿಗಳಿಗೂ ಅದು ಮೀಸಲಾಗಿದೆ. ಈಗಿನ ಪೀಳಿಗೆ ಈ ಸತ್ಯದೊಂದಿಗೆ ಅಧ್ಯಯನ ನಡೆಸುತ್ತ, ಮುಂದಿನ ಪೀಳಿಗೆಗೂ ಅರಿವು ಮೂಡಿಸಬೇಕು ಎಂದರು.

ಅರಣ್ಯ ಶ್ವಾಸಕೋಶದಂತೆ. ಶ್ವಾಸಕೋಶ ಸರಿಯಾಗಿದ್ದರೆ ಉಸಿರಾಡಬಹುದು. ವಾತಾವರಣದ ಏರುಪೇರು ಜಗತ್ತಿಗೆ ಎಚ್ಚರಿಕೆ ನೀಡುತ್ತಿದೆ. ಈ ಸವಾಲು ಎದುರಿಸಲು ಪರಿಸರ ಉಳಿಸಬೇಕು‌. ಮನುಷ್ಯನ ಅತಿಯಾಸೆಗೆ ಪರಿಸರ ನಾಶವಾಗುತ್ತಿದ್ದರೆ ಭೂಮಿ ತಾಯಿ ಕ್ಷಮೆ ನೀಡಲಾರಳು ಎಂದು ಎಚ್ಚರಿಸಿದರು.

ಕಳೆದೊಂದು ದಶಕದಲ್ಲಿ ಭಾರತ ಆರ್ಥಿಕವಾಗಿ ಬೆಳವಣಿಗೆ ಹೊಂದಿದೆ. ಜಗತ್ತಿನ ದೃಷ್ಟಿ ನಮ್ಮ ಮೇಲಿದೆ. ದೇಶದ ಯುವಶಕ್ತಿಗೆ ಜಗತ್ತಿನ ಚಿತ್ರಣ ಬದಲಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ನೆನಪಿನಲ್ಲಿಡಿ ಎನ್ನುತ್ತ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಭಾರತವು ಸಾಂಸ್ಕೃತಿಕವಾಗಿ ಸಿರಿವಂತವಾಗಿದೆ. ಪ್ರಾಚೀನ ಕಾಲದಿಂದಲೂ ಈ ನೆಲದಲ್ಲಿ ಪರಿಸರ ಸಂರಕ್ಷಣೆಯ ಮಹತ್ವ ಸಾರಲಾಗಿತ್ತು. ಪರಿಸರದೊಂದಿಗೆ ಬದುಕುವ ಕಲೆಯನ್ನು ಪೂರ್ವಜರು ಕರಗತ ಮಾಡಿಕೊಂಡಿದ್ದರು ಎಂದರು.

ಸಸಿ ನಾಟಿ ಮಾಡುವುದೇ ಅರಣ್ಯ ರಕ್ಷಣೆಯಲ್ಲ. ಸಸ್ಯ ಸಂಪತ್ತು, ಜೀವಿಗಳ ಉಳಿವು, ಗಾಳಿ, ನೀರಿನ ಸಂರಕ್ಷಣೆ ಅಗತ್ಯವಿದೆ. ಗಾಳಿ, ನೀರು ಮನುಷ್ಯನ ಆರೋಗ್ಯಯುತ ಜೀವನಕ್ಕೆ ಅಗತ್ಯ. ಈ ಕಾರಣದಿಂದಲೇ ಪೂರ್ವಜರು ನೀರು ಮತ್ತು ಗಾಳಿಯನ್ನು ದೇವರಂತೆ ಪೂಜಿಸಿದ್ದರು ಎಂದರು.

ನಿಗದಿಗಿಂತ ಹತ್ತು ನಿಮಿಷ ಮುಂಚಿತವಾಗಿಯೇ ಕಾಲೇಜು ಆವರಣಕ್ಕೆ ಬಂದ ಧನಕರ್ ಕಾರಿನಿಂದ ಇಳಿಯುತ್ತಲೇ ವಿದ್ಯಾರ್ಥಿಗಳತ್ತ ಕೈಬೀಸಿದರು. ವಿದ್ಯಾರ್ಥಿಗಳು ಖುಷಿಯಿಂದ ಕೂಗಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಭೀಮಣ್ಣ ನಾಯ್ಕ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಪಿ.ಎಲ್.ಪಾಟೀಲ ಇದ್ದರು.

ಅರಣ್ಯ ಕಾಲೇಜಿನ ಡೀನ್ ಆರ್.ವಾಸುದೇವ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ತಾಯಿ ನೆನಪಿನಲ್ಲಿ ಸಸಿ ನಾಟಿ

ಕಾಲೇಜಿನ ಆವರಣದಲ್ಲಿ ಜಗದೀಪ್ ಧನಕರ್ ಅವರು ತಮ್ಮ ತಾಯಿ ಕೇಸರಿ ದೇವಿ ಹೆಸರಿನಲ್ಲಿ, ಅವರ ಪತ್ನಿ ಸುದೇಶ ಧನಕರ್ ಅವರು ತಮ್ಮ ತಾಯಿ ಭಗವತಿ ದೇವಿ ಹಾಗೂ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ತಮ್ಮ ತಾಯಿ ಸುಮನ್ ಬಾಯಿ ಹೆಸರಿನಲ್ಲಿ ಅಶೋಕ ವೃಕ್ಷ ನೆಟ್ಟರು.

ಸಂಸತ್ ಭವನಕ್ಕೆ ಆಹ್ವಾನ

ವಿದ್ಯಾರ್ಥಿಗಳಿಗೆ ಸಂಸತ್ ಭವನಕ್ಕೆ ಆಹ್ವಾನಿಸಿದರು. ಅಲ್ಲಿ ಸಂವಾದ ನಡೆಸುವುದಾಗಿ ಘೋಷಿಸಿದರು. ಇಲ್ಲಿಯೇ ಸಂವಾದ ನಡೆಸಬಹುದು ಎಂದು ನಿರೀಕ್ಷಿಸಿದ್ದ ವಿದ್ಯಾರ್ಥಿಗಳಿಗೆ ನಿರಾಸೆ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.