ADVERTISEMENT

ಇ–ಸ್ವತ್ತು ಸರಳೀಕರಣ ಮಾರ್ಚ್ 4ಕ್ಕೆ ಅಂತಿಮ ನಿರ್ಣಯ: ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 12:51 IST
Last Updated 25 ಫೆಬ್ರುವರಿ 2022, 12:51 IST
ಶಿವರಾಮ ಹೆಬ್ಬಾರ
ಶಿವರಾಮ ಹೆಬ್ಬಾರ   

ಶಿರಸಿ: ಇ–ಸ್ವತ್ತು ನಿಯಮಾವಳಿ ಸರಳೀಕರಿಸುವ ಸಂಬಂಧ ಮಾರ್ಚ್ 4ರಂದು ಬಜೆಟ್ ಸಭೆ ಮುಗಿದ ಬಳಿಕ ಸಚಿವ ಸಂಪುಟದ ಉಪಸಮಿತಿ ಸಭೆ ನಡೆಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಇಲ್ಲಿ ಶುಕ್ರವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಸಮಿತಿಯು ಹಲವಾರು ಬಾರಿ ಸಭೆ ನಡೆಸಿ ನಿಯಮದಿಂದ ಉಂಟಾಗುತ್ತಿರುವ ತೊಡಕುಗಳ ಬಗ್ಗೆ ಮಾಹಿತಿ ಕಲೆಹಾಕಿದೆ. 4ರಂದು ನಡೆಯುವ ಸಭೆಯಲ್ಲಿ ಸಮಸ್ಯೆಗಳ ನಿವಾರಣೆಗೆ ತಾರ್ಕಿಕ ಅಂತ್ಯ ಸಿಗಲಿದೆ’ ಎಂದರು.

‘ಪ್ರಸಕ್ತ ಬಜೆಟ್‍ನಲ್ಲಿ ಉತ್ತರ ಕನ್ನಡವನ್ನು ಪ್ರವಾಸೋದ್ಯಮ ಜಿಲ್ಲೆ ಎಂದು ಘೋಷಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ. ನೀರಾವರಿ ಯೋಜನೆಗೆ ಆದ್ಯತೆ ನೀಡಬೇಕು. ಬನವಾಸಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ನೀಡಬೇಕು ಎಂಬ ಮನವಿಯನ್ನೂ ಮುಖ್ಯಮಂತ್ರಿ ಅವರಿಗೆ ಮಾಡಲಾಗಿದೆ’ ಎಂದರು.

ADVERTISEMENT

‘ಚಾಲಕರು, ಕ್ಲೀನರ್‌ಗಳ ಶ್ರೇಯೋಭಿವೃದ್ಧಿಗೆ ಪ್ರತ್ಯೇಕ ಮಂಡಳಿ ರಚಿಸಬೇಕು. ಇದಕ್ಕಾಗಿ ಕಾರ್ಮಿಕ ಇಲಾಖೆಗೆ ಅನುದಾನ ಒದಗಿಸಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದೇನೆ’ ಎಂದರು.

‘ಬೆಟ್ಟ, ಗೋಮಾಳ, ಹುಲ್ಲುಬನ್ನಿ ಪ್ರದೇಶಗಳಂತಹ ಅರಣ್ಯೇತರ ಜಾಗಗಳ ದೃಢೀಕರಣಕ್ಕೆ ಉಪಸಮಿತಿ ರಚಿಸಲಾಗಿದೆಯೇ ಹೊರತು ಅವುಗಳನ್ನು ಸಂಘಸಂಸ್ಥೆಗಳಿಗೆ ಪರಭಾರೆ ನೀಡುವ ಸಂಬಂಧ ನೀತಿ ರೂಪಿಸುವ ಉದ್ದೇಶವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.