ADVERTISEMENT

ಬೈತಖೋಲ; ಜನರ ಪರ ನಿರ್ಣಯ ಕೈಗೊಳ್ಳಿ

ಗ್ರಾಮಸ್ಥರ ಸಭೆಯಲ್ಲಿ ಮಾಜಿ ಶಾಸಕ ಸತೀಶ್ ಸೈಲ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 15:30 IST
Last Updated 23 ಜನವರಿ 2023, 15:30 IST
ಕಾರವಾರದ ಬೈತಖೋಲದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಮಾಜಿ ಶಾಸಕ ಸತೀಶ್ ಸೈಲ್ ಮಾತನಾಡಿದರು
ಕಾರವಾರದ ಬೈತಖೋಲದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಮಾಜಿ ಶಾಸಕ ಸತೀಶ್ ಸೈಲ್ ಮಾತನಾಡಿದರು   

ಕಾರವಾರ: ‘ಬೈತಖೋಲದ ಭೂದೇವಿ ಗುಡ್ಡದಲ್ಲಿ ನೌಕಾದಳ ರಸ್ತೆ ನಿರ್ಮಿಸುತ್ತಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಸಂಬಂಧ ಜ.26 ರಂದು ಜಿಲ್ಲಾ ಉಸ್ತುವಾರಿ ಸಚಿವರು ನಡೆಸುವ ಸಭೆಯಲ್ಲಿ ಸ್ಥಳೀಯ ಗ್ರಾಮಸ್ಥರ ಪರ ನಿರ್ಣಯ ಕೈಗೊಳ್ಳಬೇಕು’ ಎಂದು ಮಾಜಿ ಶಾಸಕ ಸತೀಶ ಸೈಲ್ ಆಗ್ರಹಿಸಿದರು.

ಇಲ್ಲಿನ ಬೈತಖೋಲದಲ್ಲಿ ಸೋಮವಾರ ಸ್ಥಳೀಯರ ಜತೆ ಸಭೆ ನಡೆಸಿದ ಅವರು, ‘ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗುಡ್ಡ ಕಡಿದು ರಸ್ತೆ ನಿರ್ಮಿಸಿದರೆ ಭವಿಷ್ಯದಲ್ಲಿ ದೊಡ್ಡ ದುರಂತ ಎದುರಾಗಲಿದೆ. ಭೂಕುಸಿತದಿಂದ ಎದುರಾದ ಅಪಾಯವನ್ನು ಕಾರವಾರದ ಜನ ಎದುರಿಸಿದ್ದಾರೆ. ಮತ್ತೆ ಅಂತಹ ಸ್ಥಿತಿ ಎದುರಾಗಲು ಆಸ್ಪದ ಕೊಡಬಾರದು. ಸಭೆಯಲ್ಲಿ ಜನರ ಪರ ನಿರ್ಣಯ ಆಗದಿದ್ದರೆ ಮುಂದಿನ ಸ್ಥಿತಿ ಏನಾಗಲಿದೆ ಎಂಬುದನ್ನು ಜನರೇ ನಿರ್ಣಯಿಸಲಿದ್ದಾರೆ’ ಎಂದು ಎಚ್ಚರಿಸಿದರು.

‘ಬೈತಖೋಲದಲ್ಲಿ ಗುಡ್ಡ ಕುಸಿತ ಉಂಟಾಗಿ ಅಪಾಯ ಸಂಭವಿಸಿದರೆ ಜಿಲ್ಲಾಡಳಿತ, ನೌಕಾದಳ ಹೊಣೆ ಹೊರಬೇಕಾಗುತ್ತದೆ. ರಸ್ತೆ ನಿರ್ಮಿಸುತ್ತಿರುವ ಸರ್ವೆ ನಂ.16, 33 ಅರಣ್ಯ ಭೂಮಿ ಮತ್ತು ಬಂದರು ಇಲಾಖೆ ಹೆಸರಿನಲ್ಲಿದೆ. ಅರಣ್ಯ ಇಲಾಖೆ ಲೀಸ್ ಆಧಾರದಲ್ಲಿ ಕೊಟ್ಟಿದ್ದಾಗಿ ಹೇಳುತ್ತಿದ್ದಾರೆ. ಈ ಬಗ್ಗೆ ಅಧಿಕೃತ ದಾಖಲೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸಭೆ ನಡೆಯುವ ಮುನ್ನ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಮತ್ತು ನೌಕಾದಳ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಿಸಲು ಪರವಾನಿಗೆ ನೀಡಿದ ಬಗ್ಗೆ ದಾಖಲೆ ಒದಗಿಸಬೇಕು ಎಂದು ನಗರಸಭೆ ಸದಸ್ಯ ರಾಜೆಶ ಮಾಜಾಳಿಕರ್ ಆಗ್ರಹಿಸಿದರು.

ನಗರಸಭೆ ಸದಸ್ಯರಾದ ಸ್ನೇಹಲ್ ಹರಿಕಂತ್ರ, ಸುವಿಧಾ ಉಳ್ವೇಕರ್, ಪಾಂಡುರಂಗ ರೇವಂಡಿಕರ್, ರಾಜು ತಾಂಡೇಲ, ಕೆ.ಶಂಭು ಶೆಟ್ಟಿ, ಛಾಯಾ ಜಾವಕರ್, ವಿಲ್ಸನ್ ಫರ್ನಾಂಡಿಸ್, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.