ಕಾರವಾರ: ‘ಹೈಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆ ಪೂರ್ಣಗೊಳ್ಳುವ ತನಕ, ಜಮೀನು ಅಳತೆ ಮಾಡದಂತೆ ಅಥವಾ ಯಾವುದೇ ರೀತಿಯಲ್ಲಿ ತೊಂದರೆ ಕೊಡಬಾರದು. ಈ ಬಗ್ಗೆ ಗ್ರಾಮದ ಕೆಲವು ರೈತರಿಗೆ ನಿರ್ದೇಶಿಸಬೇಕು’ ಎಂದು ಹಳಿಯಾಳ ತಾಲ್ಲೂಕಿನ ಸಾಂಬ್ರಾಣಿ ಹೋಬಳಿಯ ಕಾಳಗಿನಕೊಪ್ಪದ ರೈತರ ಮತ್ತೊಂದು ಗುಂಪು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
‘1979ರಲ್ಲಿ ಮಂಜೂರು ಮಾಡಲಾದ ಜಮೀನಿಗೆ ಇನ್ನೂ ಗಡಿ ಗುರುತು ಮಾಡಿಕೊಟ್ಟಿಲ್ಲ. ಹೈಕೋರ್ಟ್ ಆದೇಶವಿದ್ದರೂ ಪಾಲನೆಯಾಗುತ್ತಿಲ್ಲ’ ಎಂದು ಆರೋಪಿಸಿ ಕಾಳಗಿನಕೊಪ್ಪದ ರೈತರ ಒಂದು ಗುಂಪು ಕಾರವಾರದಲ್ಲಿ ಸೆ.30ರಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತ್ತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತರ ಮತ್ತೊಂದು ಗುಂಪು ಗುರುವಾರ, ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ಮನವಿ ಸಲ್ಲಿಸಿದರು.
‘ಗ್ರಾಮದ ಸರ್ವೆ ನಂಬರ್ 79, 20 ‘ಬಿ’, 5 ‘ಎ’, 58ನೇ ಬ್ಲಾಕ್ನಲ್ಲಿ 1,460 ಎಕರೆ ಜಮೀನನ್ನು ರೈತರಿಗೆ ಮಂಜೂರು ಮಾಡಲಾಗಿದೆ. ಕಾಳಗಿನಕೊಪ್ಪ, ಅಜಮನಾಳ, ಅಜಮನಾಳ ತಾಂಡಾ, ಗುಂಡೊಳ್ಳಿ ಗ್ರಾಮಗಳಲ್ಲಿ ಜಮೀನನ್ನು ರೈತರು ದಶಕಗಳಿಂದ ಉಳುಮೆ ಮಾಡುತ್ತಿದ್ದಾರೆ. ಆದರೆ, ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅದು ಇತ್ಯರ್ಥ ಆಗುವ ತನಕ ಗಡಿ ಗುರುತಿಸಲು ಜಮೀನು ಅಳತೆ ಮಾಡದಂತೆ ನಿರ್ದೇಶಿಸಬೇಕು’ ಎಂದು ಒತ್ತಾಯಿಸಿದ್ದಾಗಿ ರೈತ ಸಂಜಯ್ ಶಿವಪ್ಪ ಮೇಟಿ ಸುದ್ದಿಗಾರರಿಗೆ ತಿಳಿಸಿದರು.
ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ರೈತರಾದ ಸುಭಾಸ್, ಪರಶುರಾಮ ಶಿವನಗೌಡ, ಶ್ರೀಪಾದ ದೇವರಮನೆ, ಮಂಜುನಾಥ ಮೇಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.