ಶಿರಸಿ: ಪದೇ ಪದೇ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಮಂಗಳವಾರ ತಾಲ್ಲೂಕಿನ ದಾಸನಕೊಪ್ಪದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
ದಾಸನಕೊಪ್ಪ ವೃತ್ತದಲ್ಲಿ ಸೇರಿದ್ದ ರೈತರು ಸುಮಾರು ಒಂದು ತಾಸುಗಳ ಕಾಲ ಹೆದ್ದಾರಿಯಲ್ಲೇ ಕುಳಿತು ಧರಣಿ ನಡೆಸಿದರು. ಹೆಸ್ಕಾಂ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೊಷಣೆ ಕೂಗಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಮಾತನಾಡಿ, ‘ಬೇಸಿಗೆ ಆರಂಭವಾಗಿದ್ದು ಬೆಳೆಗಳಿಗೆ ಸಕಾಲಕ್ಕೆ ನೀರು ಸಿಗದಿದ್ದರೆ ಒಣಗಿ ಹಾಳಾಗುತ್ತವೆ. ಆದರೆ ವಿದ್ಯುತ್ ಪೂರೈಕೆಯಲ್ಲಿ ಲೋಪ ಉಂಟಾಗುತ್ತಿರುವುದರಿಂದ ಪಂಪಸೆಟ್ ಕಾರ್ಯನಿರ್ವಹಿಸದೆ ರೈತರು ಕೃಷಿ ಜಮೀನಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ’ ಎಂದರು.
‘ಅನಿಯಮಿತವಾಗಿ ವಿದ್ಯುತ್ ನಿಲುಗಡೆ ಮಾಡಿ ರೈತರಿಗೆ ತೊಂದರೆ ನೀಡಲಾಗುತ್ತಿದೆ. ಇದು ನಿಲ್ಲಬೇಕು. ಕೃಷಿಕರಿಗೆ ತೊಂದರೆ ಉಂಟಾಗದಂತೆ ಕ್ರಮವಹಿಸಬೇಕು’ ಎಂದರು.
ಹೆಸ್ಕಾಂ ಎಇಇ ನಾಗರಾಜ್ ಪಾಟೀಲ್, ವಿನಯ ರಾಚೋಟಿ, ನಾರಾಯಣ ಕರ್ಕಿ ರೈತರ ಮನವಿ ಸ್ವೀಕರಿಸಿದರು.
ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ನಾಯ್ಕ, ತಾಲ್ಲೂಕು ಘಟಕದ ಅಧ್ಯಕ್ಷ ಪ್ರಮೋದ್, ದಾಸನಕೊಪ್ಪ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ವಸಂತ ಗೌಡ್ರು ವದ್ದಲ, ನಾಗರಾಜ್ ಡಾಂಗೆ, ಜಾಕಿರ್ ಹುಸೇನ್, ದೀಪಕ್, ಮಂಜುನಾಥ ಅಂಡಗಿ, ನಂಜುಂಡ ಕಿರವತ್ತಿ ನಾಗರಾಜ್ ಪಾರ್ಸಿ, ಪ್ರಕಾಶ ದನ್ನಳ್ಳಿ, ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.